☆☆🌹 ಶಿವರಾತ್ರಿಯಂದು ಮಾಡಬೇಕಾದ ಮೂರು ಕರ್ತವ್ಯಗಳು 🌹☆☆
ಒಂದೊಂದು ದೇವರ ಹಬ್ಬಕ್ಕೂ ಒಂದೊಂದು ರೀತಿಯ ವ್ರತ ನಿಯಮಗಳು ಇರುತ್ತವೆ. ಹಾಗೆ ಮಾಡಿದರೆ ಮಾತ್ರವೇ ಆ ಹಬ್ಬ ಹರಿದಿನಗಳು ಸಾರ್ಥಕವಾಗಿ ಸಫಲವಾಗುತ್ತವೆ. ವರಸಿದ್ಧಿವಿನಾಯಕನಿಗೆ ಕರಿಗಡುಬು; ಶ್ರೀರಾಮನವಮೀ ಮತ್ತು ನರಸಿಂಹ ಜಯಂತಿಗಳಲ್ಲಿ ಪಾನಕ ಕೋಸಂಬರಿ; ಶ್ರೀಕೃಷ್ಣ ಜನ್ಮಾಷ್ಟಮಿಗೆ ಚಕ್ಕುಲಿ, ಕೋಡುಬಳೆ, ತೇಂಗೊಳಲು, ಅವಲಕ್ಕಿ, ಮೊಸರು; ಏಕಾದಶೀ ದಿನ ಹಣ್ಣುಹಂಪಲು; ಯುಗಾದಿ ದೀಪಾವಳಿಗಳಲ್ಲಿ ಅಭ್ಯಂಜನ ಸ್ನಾನ ಮತ್ತು ಹೋಳಿಗೆ ಊಟ; ಇತ್ಯಾದಿ ಇತ್ಯಾದಿ. ಹೀಗೆಯೇ ಶಿವರಾತ್ರಿ ಹಬ್ಬಕ್ಕೂ ಕೆಲವು ವ್ರತನಿಯಮಗಳುಂಟು. ಶಿವನ ಭಕ್ತರು ಶಿವರಾತ್ರಿಯಂದು ಈ ಕೆಳಗಿನ ಮೂರು ನಿಯಮಗಳನ್ನು ಪಾಲಿಸುವರು:
1) ಶಿವಾಭಿಷೇಕಾದಿ ಪೂಜೆ
2) ಜಾಗರಣೆ
3) ಉಪವಾಸ
ಈ ಮೂರರಿಂದ ಪರಮಶಿವನು ಸಂತುಷ್ಟನಾಗಿ ತನ್ನ ಭಕ್ತರಿಗೆ ವರಪ್ರದನಾಗುತ್ತಾನೆ. ಈ ಮೂರು ನಿಯಮಗಳ ಅರ್ಥವನ್ನೀಗ ನೋಡೋಣ.
☆☆ ಶಿವಪೂಜಾ ☆☆
ಶಿವಾಲಯಗಳಿಗೆ ಹೋಗಿ ಅಥವಾ ತಮ್ಮ ಮನೆಯಲ್ಲಿಯೇ ಶಿವಲಿಂಗವನ್ನು ಇಟ್ಟುಕೊಂಡು ಅದಕ್ಕೆ ಅಭಿಷೇಕ, ಅಷ್ಟೋತ್ತರ, ಸಹಸ್ರನಾಮ ಪೂಜೆಯನ್ನು ಯಥಾಶಕ್ತಿ ಮಾಡಬಹುದು. ಬಿಲ್ವದಳಗಳಿಂದ ಪೂಜಿಸಿದರೆ ತುಂಬಾ ಶ್ರೇಷ್ಠ. ಶಿವರಾತ್ರಿಯಂದು ಸಾಯಂಕಾಲ 6 ಗಂಟೆಯಿಂದ ಪ್ರಾರಂಭಿಸಿ ಮಾರನೆಯ ದಿವಸ ಬೆಳಿಗ್ಗೆ 6 ಗಂಟೆಯವರೆಗೂ ನಾಲ್ಕೂ ಜಾವಗಳಲ್ಲಿ ಶಿವನ ಪೂಜೆಯನ್ನು ಮಾಡಬೇಕು.
☆☆ ಜಾಗರಣೆ ☆☆
ಅಂದು ರಾತ್ರಿಯೆಲ್ಲ ಶಿವನನ್ನು ಪೂಜಿಸುತ್ತಾ ಶಿವ ಪಂಚಾಕ್ಷರೀ ಮಂತ್ರವನ್ನು ಜಪಿಸುತ್ತಾ, ಶಿವನ ಧ್ಯಾನದಲ್ಲಿಯೇ ಮಗ್ನರಾಗಿರಬೇಕು. ಅಂದು ರಾತ್ರಿ ಮಲಗಬಾರದು. ನಿದ್ರೆಯನ್ನು ತಡೆಯುವುದಕ್ಕಾಗಿ ಸಿನಿಮಾಮಂದಿರಗಳಿಗೆ ಖಂಡಿತಾ ಹೋಗಬಾರದು. ಪರಮೇಶ್ವರನ ಪೂಜೆಯನ್ನು ಮಾಡುತ್ತಾ ಇದ್ದರೆ ನಿದ್ರೆಯು ಬರುವುದೇ ಇಲ್ಲ.
☆☆ ಉಪವಾಸ ☆☆
ಶಿವರಾತ್ರಿಯ ದಿನದಂದು ಬೇಯಿಸಿದ ಆಹಾರಗಳನ್ನು ತಿನ್ನಬಾರದು. ಕೇವಲ ಹಾಲು ಹಣ್ಣುಗಳನ್ನು ಮಾತ್ರ ಲಘುವಾಗಿ ಸ್ವೀಕರಿಸಬೇಕು. ಶಕ್ತಿ-ಸಾಮರ್ಥ್ಯಗಳಿದ್ದರೆ ಇದನ್ನೂ ತೆಗೆದುಕೊಳ್ಳದೇ ಕೇವಲ ನೀರನ್ನು ಕುಡಿದುಕೊಂಡೇ ಇರಬೇಕು. ಹೀಗೆ ಉಪವಾಸವಿದ್ದು, ರಾತ್ರಿಯೆಲ್ಲಾ ಜಾಗರಣೆ ಮಾಡುತ್ತಾ ಶಿವನಿಗೆ ಅಭಿಷೇಕ ಅಷ್ಟೋತ್ತರ ಪೂಜೆಗಳನ್ನು ಮಾಡಿದಾಗ ಅದು ಅನ್ವರ್ಥ ಶಿವರಾತ್ರಿಯಾಗುತ್ತದೆ.
ಶ್ರೀ ಶಿವಾರ್ಪಣಮಸ್ತು
Post a Comment