*ಯುವ ಕಾಂಗ್ರೆಸ್ ನಿಂದ ಜಿಲ್ಲಾ ಹಾಗೂ ರಾಜ್ಯಮಟ್ಟದಲ್ಲಿ ‘ಯಂಗ್ ಇಂಡಿಯಾ ಕೆ ಬೋಲ್’ ಭಾಷಣ ಸ್ಪರ್ಧೆ*

*ಯುವ ಕಾಂಗ್ರೆಸ್ ನಿಂದ ಜಿಲ್ಲಾ ಹಾಗೂ ರಾಜ್ಯಮಟ್ಟದಲ್ಲಿ ‘ಯಂಗ್ ಇಂಡಿಯಾ ಕೆ ಬೋಲ್’ ಭಾಷಣ ಸ್ಪರ್ಧೆ*

*ಬೆಂಗಳೂರು:*

ರಾಜ್ಯದ ಯುವಕರು ತಮ್ಮ ನೋವು, ಸಮಸ್ಯೆಗಳ ಬಗ್ಗೆ ಧ್ವನಿ ಎತ್ತಲು, ರಾಜಕೀಯದಲ್ಲಿ ಸಕ್ರಿಯವಾಗಿ ತೊಡಗಿಸಿಕೊಳ್ಳಲು ಒಂದು ವೇದಿಕೆ ಕಲ್ಪಿಸುವ ಉದ್ದೇಶದಿಂದ ಕರ್ನಾಟಕ ರಾಜ್ಯ ಯುವ ಕಾಂಗ್ರೆಸ್ ವತಿಯಿಂದ ಜಿಲ್ಲಾ ಹಾಗೂ ರಾಜ್ಯ ಮಟ್ಟದಲ್ಲಿ ‘ಯಂಗ್ ಇಂಡಿಯಾ ಕೆ ಬೋಲ್’ ಭಾಷಣ ಸ್ಪರ್ಧೆಯನ್ನು ಹಮ್ಮಿಕೊಳ್ಳಲಾಗಿದೆ.

ಕ್ವೀನ್ಸ್ ರಸ್ತೆಯ ಕೆಪಿಸಿಸಿ ಕಚೇರಿಯಲ್ಲಿ ಭಾರತ ರಾಷ್ಟ್ರೀಯ ಯೂಥ್ ಕಾಂಗ್ರೆಸ್ ನ ಅಧ್ಯಕ್ಷ ಬಿ.ವಿ ಶ್ರೀನಿವಾಸ್, ಎಐಸಿಸಿ ಜಂಟಿ ಕಾರ್ಯದರ್ಶಿ ಹಾಗೂ ಯುವ ಕಾಂಗ್ರೆಸ್ ರಾಜ್ಯ ಉಸ್ತುವಾರಿ ಕೃಷ್ಣ ಅಲವರು, ರಾಜ್ಯ ಯೂಥ್ ಕಾಂಗ್ರೆಸ್ ಅಧ್ಯಕ್ಷ ಮೊಹಮದ್ ನಲಪಾಡ್ ಹ್ಯಾರಿಸ್ ಅವರು ಅನಾವರಣ ಮಾಡಿದರು. ಈ ಸಂದರ್ಭದಲ್ಲಿ ರಾಜ್ಯ ಯೂಥ್ ಕಾಂಗ್ರೆಸ್ ಉಪಾಧ್ಯಕ್ಷರು ಹಾಗೂ ಈ ಸ್ಪರ್ಧೆಯ ಉಸ್ತುವಾರಿಯಾಗಿರುವ ಭವ್ಯ, ಉಪಾಧ್ಯಕ್ಷರಾದ ದೀಪಿಕಾ ರೆಡ್ಡಿ, ಪ್ರಧಾನ ಕಾರ್ಯದರ್ಶಿಗಳಾದ ಚೈತ್ರಾ, ಮಾರುತಿ, ಎಐಸಿಸಿ ವಕ್ತಾರರು ಹಾಗೂ ಯುವ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿಗಳಾದ ಐಶ್ವರ್ಯ ಮಹದೇವ್, ಪ್ರಧಾನ ಕಾರ್ಯದರ್ಶಿಗಳಾದ ಆಶಿಕ್ ಗೌಡ,   ಅವರು ಉಪಸ್ಥಿತರಿದ್ದರು.

ಈ ಸಂದರ್ಭದಲ್ಲಿ ಮಾತನಾಡಿದ ಬಿ.ವಿ ಶ್ರೀನಿವಾಸ್ ಅವರು, ‘ಕರ್ನಾಟಕ ರಾಜ್ಯದಲ್ಲಿ ಯುವಕರಿಗೆ ವೇದಿಕೆ ಕಲ್ಪಿಸಬೇಕು. ಯುವ ಕಾಂಗ್ರೆಸ್ ಕೇವಲ ಧರಣಿ, ಹೋರಾಟಗಳನ್ನು ಮಾಡುವುದರ ಜೊತೆಗೆ ಇತರೆ ಅನೇಕ ಕಾರ್ಯಕ್ರಮಗಳನ್ನು ರೂಪಿಸುತ್ತಿದ್ದು, ಈ ಕಾರ್ಯಕ್ರಮ ಕೂಡ ಒಂದಾಗಿದೆ. ಈ ಕಾರ್ಯಕ್ರಮದ ಮೊದಲ ಅವತರಣಿಕೆ ಸಾಕಷ್ಟು ಯಶಸ್ಸು ಕಂಡಿದ್ದು, ಅನೇಕ ಯುವಕರ ಪ್ರಬುದ್ಧ ಮಾತುಗಳನ್ನು ಕೇಳಬಹುದು. ಕರ್ನಾಟಕದ ಯುವಕರು ತಮ್ಮ ಮಾತುಗಳು, ಅಭಿಪ್ರಾಯವನ್ನು ಹಂಚಿಕೊಳ್ಳಲು ಅವಕಾಶ ಇಲ್ಲವಾಗಿದೆ. ಹೀಗಾಗಿ ನಾವು ಆ ವೇದಿಕೆಯನ್ನು ನೀಡುತ್ತಿದ್ದೇವೆ. ಇನ್ನು ಈ ವೇದಿಕೆಯಲ್ಲಿ ಕಾಂಗ್ರೆಸ್ ವಿಚಾರವನ್ನು ಜನರಿಗೆ ಮುಟ್ಟಿಸಬೇಕು ಎಂಬ ಬೇಡಿಕೆ ಹಿನ್ನೆಲೆಯಲ್ಲಿ ಈ ಕಾರ್ಯಕ್ರಮ ಆಯೋಜಿಸಲಾಗಿದೆ. ಸ್ಪರ್ಧೆಯಲ್ಲಿ ಸ್ಪರ್ಧಿಗೆ ಮೊದಲೇ ವಿಷಯಗಳನ್ನು ನೀಡುತ್ತೇವೆ. ಆ ವಿಚಾರದ ಮೇಲೆ ಅವರು ಮಾತನಾಡುತ್ತಾರೆ. ಈ ಸ್ಪರ್ಧೆಯಲ್ಲಿ ಅರ್ಹರನ್ನು ತೀರ್ಪುಗಾರರನ್ನಾಗಿ ಮಾಡುತ್ತೇವೆ. ಜಿಲ್ಲಾ ಮಟ್ಟದಲ್ಲಿ ಸ್ಪರ್ಧೆ ದಿನಾಂಕವನ್ನು ಪ್ರಕಟಿಸಲಾಗುವುದು. ಬೇರೆ ಪಕ್ಷಗಳಲ್ಲಿ ವಕ್ತಾರರ ಕೆಲಸ ಎಂದರೆ ಸುಳ್ಳನ್ನೇ ನಿಜ ಮಾಡುವುದಾಗಿದೆ. ಅವರಿಗೆ ವಾಟ್ಸಪ್, ಫೇಸ್ಬುಕ್ ನಲ್ಲಿ ಬರುವ ಸುಳ್ಳನ್ನು ನಿಜ ಮಾಡುವ ಕೆಲಸ ಮಾಡುತ್ತಾರೆ. ನಮ್ಮ ವೇದಿಕೆಯಲ್ಲಿ ಅವರ ಅಭಿಪ್ರಾಯ, ಜ್ಞಾನವನ್ನು ಪ್ರಸ್ತುತ ಪಡಿಸಲು ಅವಕಾಶ ನೀಡಲಾಗುವುದು. ರಾಜ್ಯಮಟ್ಟದಲ್ಲಿ ಗೆದ್ದವರನ್ನು ರಾಷ್ಟ್ರೀಯ ಮಟ್ಟದ ಸ್ಪರ್ಧೆಯಲ್ಲಿ ಭಾಗವಹಿಸಲು ಅವಕಾಶ ನೀಡಲಾಗುವುದು.  ರಾಜ್ಯದ ಯುವಕರಿಗೆ ಇದೊಂದು ಉತ್ತಮ ಅವಕಾಶವಾಗಿದ್ದು, ಇದನ್ನು ಸದುಪಯೋಗಪಡಿಸಿಕೊಳ್ಳಬೇಕು ಎಂದು ಕರೆ ನೀಡುತ್ತೇವೆ’ ಎಂದು ತಿಳಿಸಿದರು.

ಇದಕ್ಕೂ ಮುನ್ನ ಮಾತನಾಡಿದ ಕೃಷ್ಣ ಅಲವರು, ‘ಬೆಂಗಳೂರಿಗೆ ಬಂದಿರುವುದು ಸಂತೋಷ. ಈ ಕಾರ್ಯ ಕ್ರಮ ಅನಾವರಣ ಮಾಡಲು ಬಂದಿದ್ದೇವೆ. ಈ ಕಾರ್ಯಕ್ರಮದ ಬಗ್ಗೆ ಹೇಳುವುದಾದರೆ, ರಾಜಕಾರಣದ ಬಗ್ಗೆ ಯುವಕರಲ್ಲಿ ಆಸಕ್ತಿ ಮೂಡಿಸಿ ಅವರಿಗೆ ಲಭ್ಯವಾಗುವಂತೆ ಮಾಡುವುದು ರಾಷ್ಟ್ರೀಯ ಯುವ ಕಾಂಗ್ರೆಸ್ ಕರ್ತವ್ಯವೆಂದು ಭಾವಿಸಿದೆ. ರಾಜಕಾರಣ ಚುನಾವಣೆಯಲ್ಲಿ ಆರಂಭವಾಗಿ ಚುನಾವಣೆಯಲ್ಲೇ ಅಂತ್ಯವಾಗುತ್ತದೆ ಎಂದು ಸಾಕಷ್ಟು ಬಾರಿ ಹೇಳುತ್ತೇವೆ. ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ರಾಜಕಾರಣಕ್ಕೆ ಹಲವು ಆಯಾಮಗಳಿದ್ದು, ಯುವಕರು ರಾಜಕೀಯದಲ್ಲಿ ಸಕ್ರಿಯವಾಗಿ ಪಾಲ್ಗೊಳ್ಳುವಂತೆ ಮಾಡಬೇಕು ಎಂಬುದು ರಾಷ್ಟ್ರೀಯ ಯುವ ಕಾಂಗ್ರೆಸ್ ನ ಜವಾಬ್ದಾರಿಯಾಗಿದೆ. ಇದಕ್ಕಾಗಿ ಈ ಕಾರ್ಯಕ್ರಮವನ್ನು ಆಯೋಜಿಸಲಾಗಿದೆ. ಯುವಕರು ನಿರುದ್ಯೋಗ, ಹಣದುಬ್ಬರ, ಭದ್ರತೆ, ಮಹಿಳಾ ವಿಚಾರ, ರೈತರ ವಿಚಾರ, ವ್ಯಪಾರದ ವಿಚಾರಗಳಲ್ಲಿ ಯುವಕರು ತಮ್ಮ ಧ್ವನಿ ಎತ್ತಿ ಸರ್ಕಾರವನ್ನು ಪ್ರಶ್ನಿಸುವಂತಾಗಬೇಕು. ದೇಶದ ಯುವಕರು ನಿರುದ್ಯೋಗದ ನೋವು ಅನುಭವಿಸುತ್ತಿದ್ದರೆ, 8 ವರ್ಷಗಳಾದರೂ ನಿರುದ್ಯೋಗ ದಾಖಲೆ ಪ್ರಮಾಣದ ಏರಿಕೆಯಾಗಿರುವುದು ಏಕೆ? ಎಂದು ಪ್ರಧಾನ ಮಂತ್ರಿಗಳಿಗೆ ಪ್ರಶ್ನೆ ಮಾಡುವಂತಾಗಬೇಕು. ಇನ್ನು ಬೆಲೆ ಏರಿಕೆಯ ಬಿಸಿ ತಟ್ಟಿದ್ದರೆ ಯುವಕರು ಇದನ್ನು ಧೈರ್ಯವಾಗಿ ಪ್ರಶ್ನಿಸಲು ಒಂದು ವೇದಿಕೆ ಕಲ್ಪಿಸಬೇಕು. ಪೆಟ್ರೇಲ್, ಡೀಸೆಲ್ ದರ ಇಳಿಸಲು ಸಾಧ್ಯವಾಗುತ್ತಿಲ್ಲ ಏಕೆ ಎಂದು ಪ್ರಧಾನಿಗಳನ್ನು ಪ್ರಶ್ನಿಸಲು ಅವಕಾಶ ಕಲ್ಪಿಸಲಾಗುತ್ತಿದೆ. ಈ ಕಾರ್ಯಕ್ರಮ ಯುವಕರು ಹಲವು ವಿಚಾರವಾಗಿ ತಮ್ಮ ಅಭಿಪ್ರಾಯವನ್ನು ಮುಕ್ತವಾಗಿ ಹಂಚಿಕೊಳ್ಳುವ ರಾಜಕೀಯ ವೇದಿಕೆಯಾಗಿದೆ. ಪ್ರತಿ ಯುವಕರು ಈ ವೇದಿಕೆಯ ಸದುಪಯೋಗಪಡಿಸಿಕೊಳ್ಳಬೇಕು, ತಮ್ಮ ಸಮಸ್ಯೆಗಳ ಬಗ್ಗೆ ಧ್ವನಿ ಎತ್ತಬೇಕು ಎಂದು ಕರೆ ನೀಡುತ್ತೇನೆ’ ಎಂದು ತಿಳಿಸಿದರು.

ಈ ಸ್ಪರ್ಧೆಯ ಕುರಿತು ಮಾಹಿತಿ ನೀಡಿದ ನಲಪಾಡ್ ಅವರು, ‘ಶ್ರೀನಿವಾಸ್ ಅವರು ಹಾಗೂ ಕೃಷ್ಣ ಅಲವರು ಅವರು ಈ ಕಾರ್ಯಕ್ರಮವನ್ನು ಅನಾವರಣಗೊಳಿಸುತ್ತಿರುವುದು ಬಹಳ ಸಂತೋಷದ ವಿಚಾರ. ರಾಜ್ಯದಲ್ಲಿನ ಯುವಕರು ರಾಜ್ಯದ ಸಮಸ್ಯೆ, ಪ್ರಮುಖ ವಿಚಾರಗಳ ಬಗ್ಗೆ ಮಾತನಾಡಿ ತಮ್ಮ ಮಾತಿನ ಸಾಮರ್ಥ್ಯವನ್ನು ಅನಾವರಣಗೊಳಿಸಲು ಇದೊಂದು ಉತ್ತಮ ವೇದಿಕೆಯಾಗಿದೆ. ಕಾಂಗ್ರೆಸ್ ಪಕ್ಷ ಈ ದೇಶಕ್ಕೆ ಸ್ವಾತಂತ್ರ್ಯ ತಂದುಕೊಟ್ಟಿದ್ದು, ಕಾಂಗ್ರೆಸ್ ಇತಿಹಾಸ ಈ ದೇಶದ ಇತಿಹಾಸ, ಕಾಂಗ್ರೆಸ್ ಇತಿಹಾಸವನ್ನು ಜನರಿಗೆ ತಲುಪಿಸಲು ಉತ್ತಮ ವಾಕ್ಚಾತುರ್ಯವಿರುವ ಯುವಕರ ಅನ್ವೇಷಣೆಗೆ ಯುವ ಕಾಂಗ್ರೆಸ್ ಈ ಕಾರ್ಯಕ್ರಮ ಆಯೋಜಿಸುತ್ತಿದೆ. ಈ ಕಾರ್ಯಕ್ರಮದ ಮೊದಲ ಅವತರಣಿಗೆಯ ಅಂತಿಮ ಸ್ಪರ್ಧೆ ದೆಹಲಿಯಲ್ಲಿ ಯಶಸ್ವಿಯಾಗಿ ನಡೆದಿತ್ತು. ರಾಜ್ಯದಿಂದ 15 ಯುವಕು ಅದರಲ್ಲಿ ಭಾಗವಹಿಸಿ ಮೂವರು ಪ್ರಶಸ್ತಿ ಗೆದ್ದಿದ್ದರು. ಇಂತಹ ಉತ್ತಮ ಕಾರ್ಯಕ್ರಮವನ್ನು ರಾಜ್ಯದಲ್ಲಿಯೂ ಮಾಡಬೇಕು ಎಂಬ ಉದ್ದೇಶದೊಂದಿಗೆ. ಕರ್ನಾಟಕದಲ್ಲಿ ಜಿಲ್ಲಾ ಮಟ್ಟದಲ್ಲಿ  ಸ್ಪರ್ಧೆ ನಡೆಸಲಾಗುವುದು. ಅಲ್ಲಿ ಆಯ್ಕೆಯಾದ ಪ್ರಮುಖ ಅಭ್ಯರ್ಥಿಗಳು ಜೂನ್ 18ರಂದು ಬೆಂಗಳೂರಿನಲ್ಲಿ ರಾಜ್ಯ ಮಟ್ಟದ ಅಂತಿಮ ಸ್ಪರ್ಧೆ ನಡೆಸಲಾಗುವುದು. ಜಿಲ್ಲಾ ಮಟ್ಟದಲ್ಲಿ ಭಾಗವಹಿಸಿ ಗೆದ್ದವರು ಮಾತ್ರ ರಾಜ್ಯ ಮಟ್ಟದ ಸ್ಪರ್ಧೆಯಲ್ಲಿ ಭಾಗವಹಿಸುತ್ತಾರೆ. ಈ ಸ್ಪರ್ಧೆಯ ಅಂತಿಮ ಸುತ್ತಿನಲ್ಲಿ ವಿಜೇತರಾಗುವವರಿಗೆ ಪ್ರಶಸ್ತಿ ನೀಡಲಾಗುವುದು. ಮೊದಲ ಬಹುಮಾನ ಐ ಫೋನ್ 13 ಪ್ರೋ, ಎರಡನೇ ಬಹುಮಾನವಾಗಿ ಐ ಫೋನ್ 13 ಹಾಗೂ ಮೂರನೇ ಬಹುಮಾನವಾಗಿ ಒನ್ ಪ್ಲಸ್ ಫೋನ್ ಅನ್ನು ನೀಡಲಾಗುವುದು. ಜೊತೆಗೆ 10 ಉತ್ತಮ ಭಾಷಣ ಮಾಡುವವರನ್ನು ಯೂವ ಕಾಂಗ್ರೆಸ್ ವಕ್ತಾರರನ್ನಾಗಿ ನೇಮಕ ಮಾಡಲಾಗುವುದು, ಜಿಲ್ಲಾ ಮಟ್ಟದಲ್ಲಿ ಆಯ್ಕೆಯಾದವರುನ್ನು ಜಿಲ್ಲಾ ಮಟ್ಟದ ವಕ್ತಾರರನ್ನಾಗಿ ಆಯ್ಕೆ ಮಾಡಲಾಗುವುದು. ಈ ಸ್ಪರ್ಧೆಯ ಉಸ್ತುವಾರಿ ಯಾಗಿ ನಮ್ಮ ಉಪಾಧ್ಯಕ್ಷರಾದ ಭವ್ಯ ಹಾಗೂ ಸಿರಿಲ್ ಅವರನ್ನು ನೇಮಿಸಲಾಗಿದೆ. ಇನ್ನು ಸ್ಪರ್ಧೆಯಲ್ಲಿ ಭಾಗವಹಿಸಲು ನಿಮ್ಮ ಹೆಸರು ನೋಂದಾಯಿಸಿಕೊಳ್ಳಲು https://ycea.in/youngindia/index.html   ಜಾಲತಾಣಕ್ಕೆ ಭೇಟಿ ನೀಡಿ’ ಎಂದು ತಿಳಿಸಿದರು.

Post a Comment

Previous Post Next Post