ಉಸ್ತುವಾರಿ ವಹಿಸಿರುವ ಎಐಸಿಸಿ ಪ್ರಧಾನ ಕಾರ್ಯದರ್ಶಿ ರಣದೀಪ್ ಸಿಂಗ್ ಸುರ್ಜೆವಾಲ, ವಿಧಾನಸಭೆ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಅವರ ಜತೆ ಕೆಪಿಸಿಸಿ ಅಧ್ಯಕ್ಷ ಡಿ ಕೆ ಶಿವಕುಮಾರ್ ಅವರು ಕೆಪಿಸಿಸಿ ಕಚೇರಿಯಲ್ಲಿ ಜಂಟಿ ಪತ್ರಿಕಾಗೋಷ್ಠಿಯಲ್ಲಿ ಸೋಮವಾರ ಮಾತನಾಡಿದರು

[29/08, 1:01 PM] Kpcc official: ಕರ್ನಾಟಕದಲ್ಲಿ ಕಾಂಗ್ರೆಸ್ ಉಸ್ತುವಾರಿ ವಹಿಸಿರುವ ಎಐಸಿಸಿ ಪ್ರಧಾನ ಕಾರ್ಯದರ್ಶಿ ರಣದೀಪ್ ಸಿಂಗ್ ಸುರ್ಜೆವಾಲ, ವಿಧಾನಸಭೆ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಅವರ ಜತೆ ಕೆಪಿಸಿಸಿ ಅಧ್ಯಕ್ಷ ಡಿ ಕೆ ಶಿವಕುಮಾರ್ ಅವರು ಕೆಪಿಸಿಸಿ ಕಚೇರಿಯಲ್ಲಿ ಜಂಟಿ ಪತ್ರಿಕಾಗೋಷ್ಠಿಯಲ್ಲಿ ಸೋಮವಾರ ಮಾತನಾಡಿದರು. ಎಐಸಿಸಿ ಕಾರ್ಯದರ್ಶಿಗಳಾದ ಅಭಿಷೇಕ್ ದತ್, ಮಯೂರ್ ಜಯಕುಮಾರ್, ವಿಷ್ಣುನಾಥನ್, ರೋಜಿ ಎಂ ಜಾನ್, ಕೆಪಿಸಿಸಿ ಪ್ರಚಾರ ಸಮಿತಿ ಅಧ್ಯಕ್ಷ ಎಂ.ಬಿ. ಪಾಟೀಲ್, ಕಾರ್ಯಾಧ್ಯಕ್ಷರಾದ ಈಶ್ವರ್ ಖಂಡ್ರೆ, ಸಲೀಮ್ ಅಹ್ಮದ್, ಧ್ರುವನಾರಾಯಣ್, ಸತೀಶ್ ಜಾರಕಿಹೊಳಿ, ಕೆಪಿಸಿಸಿ ಸಂವಹನ ಮತ್ತು ಸಾಮಾಜಿಕ ಜಾಲತಾಣ ಘಟಕದ ಅಧ್ಯಕ್ಷ ಪ್ರಿಯಾಂಕ್ ಖರ್ಗೆ ಉಪಸ್ಥಿತರಿದ್ದರು.
[29/08, 3:32 PM] Kpcc official: *ಜಂಟಿ ಪತ್ರಿಕಾಗೋಷ್ಠಿಯಲ್ಲಿ ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಅವರ ಮಾತುಗಳು:*

ನಮ್ಮ ರಾಜ್ಯ ಬಸವಣ್ಣನ ನಾಡು. ಅವರು ನಮಗೆ ನುಡಿದಂತೆ ನಡೆಯಬೇಕು ಎಂಬ ಸಂದೇಶ ಸಾರಿದ್ದಾರೆ. ಹೀಗಾಗಿ ರಾಹುಲ್ ಗಾಂಧಿ ಅವರು ಬಸವಕಲ್ಯಾಣದಲ್ಲಿ, ನಾವು ನುಡಿದಂತೆ ನಡೆದಿದ್ದೇವೆ. ನೀವು ನುಡಿದಂತೆ ನಡೆಯುತ್ತಿದ್ದೀರಾ? ಎಂದು ಬಿಜೆಪಿಗೆ ಸವಾಲು ಹಾಕಿದ್ದರು.

ಕಳೆದ ಚುನಾವಣೆಯಲ್ಲಿ ಬಿಜೆಪಿ ಪ್ರಣಾಳಿಕೆಯನ್ನು ನಾನಿಂದು ನಿಮ್ಮ ಮುಂದೆ ಇಡುತ್ತಿದ್ದೇವೆ. ಆಮೂಲಕ ಬಿಜೆಪಿಯಿಂದ ವಚನ ವಂಚನೆಯಾಗಿದೆ ಎಂದು ಹೇಳುತ್ತಿದ್ದೇನೆ. ಯಡಿಯೂರಪ್ಪನವರು ತಮ್ಮ ಪ್ರಣಾಳಿಕೆಯಲ್ಲಿ 'ಕರ್ನಾಟಕದ ಮುಂದೆ ನಮ್ಮ ವಚನ' ಎಂದು ಹೇಳಿದ್ದರು. ಹಾಗಾಗಿ ಕಾಂಗ್ರೆಸ್ ಪಕ್ಷ ಇಂದಿನಿಂದ ಸರ್ಕಾರಕ್ಕೆ ಉತ್ತರ ಕೇಳುತ್ತಿದ್ದು, ಕಾಂಗ್ರೆಸ್ ನಾಯಕರೆಲ್ಲರೂ ಸಾಮಾಜಿಕ ಜಾಲತಾಣಗಳ ಮೂಲಕ ಬಿಜೆಪಿಯವರು ಕೊಟ್ಟ ವಚನ ಉಳಿಸಿಕೊಂಡಿದ್ದಾರಾ ಎಂದು ಕೇಳುತ್ತಿದ್ದೇವೆ. ನಮ್ಮ ಈ ಪ್ರಶ್ನೆಗಳಿಗೆ ನಿಮ್ಮ ಹತ್ತಿರ ಇದೆಯಾ ಉತ್ತರ? ಎಂಬ ಪ್ರಶ್ನೆ ಕಾಡುತ್ತಿದೆ.

ನೀವು ಬಂಡರು, ಸುಳ್ಳಿನ ಸರದಾರರು. ಒಂದು ಸುಳ್ಳನ್ನು ನೂರು ಬಾರಿ ಹೇಳಿ ಅದನ್ನೇ ಸುಳ್ಳು ಮಾಡಬೇಕು ಎಂದು ಬಿಜೆಪಿಯ ಮಾಜಿ ಅಧ್ಯಕ್ಷ ಈಶ್ವರಪ್ಪ ಭಾಷಣವನ್ನೂ ಮಾಡಿದ್ದಾರೆ. ಹೀಗಾಗಿ ನೀವು ಆತ್ಮಸಾಕ್ಷಿಯ ಉತ್ತರ ನೀಡಬೇಕು.

ಬಿಜೆಪಿ ಸರ್ಕಾರ ಶೇ.90ರಷ್ಟು ಭರವಸೆಗಳಲ್ಲಿ ನುಡಿದಂತೆ ನಡೆಯಲು ಸಾಧ್ಯವಾಗಿಲ್ಲ. ಆಮೂಲಕ ಅವರು ವಚನ ಭ್ರಷ್ಟಚಾರಿಗಳಾಗಿದ್ದಾರೆ. ಇಲ್ಲಿ ವಚನ ವಂಚನೆಯಾಗಿದೆ ಎಂದು ಹೇಳಲು ನಾವಿಂದು ಕೂತಿದ್ದೇವೆ. ಇಂದಿನಿಂದ ನಮ್ಮ ಪಕ್ಷದ ನಾಯಕರೆಲ್ಲರೂ ನಿತ್ಯ ಒಂದೊಂದು ಪ್ರಶ್ನೆ ಕೇಳುತ್ತೇವೆ.

ನಿಮ್ಮ ರಾಷ್ಟ್ರೀಯ ನಾಯಕ ಪ್ರಧಾನಿ ಮೋದಿ ಅವರು ರೈತರ ಆದಾಯ ಡಬಲ್ ಮಾಡುವುದಾಗಿ ಹೇಳಿದ್ದರು. ಆದರೆ ಇಂದು ರೈತ ಸಾಯುವ ಪರಿಸ್ಥಿತಿ ನಿರ್ಮಾಣವಾಗಿದೆ. ಅವರಿಗೆ ಸರಿಯಾದ ಬೆಂಬಲ ಬೆಲೆ ನೀಡಲಿಲ್ಲ, ಗೊಬ್ಬರ ಪೂರೈಸಲಾಗಲಿಲ್ಲ. ಜನ ಪ್ರತಿ ಲೀಟರ್ ನೀರಿಗೆ 25 ರೂ. ನೀಡುತ್ತಿರುವಾಗ, ಹಾಲು ಉತ್ಪಾದಿಸುವ ರೈತನಿಗೆ ಪ್ರತಿ ಲೀಟರ್ ಗೆ ಕೇವಲ 28 ರೂ ಮಾತ್ರ ಸಿಗುತ್ತಿದೆ. ಹೀಗಾಗಿ ಸಿದ್ದರಾಮಯ್ಯ ಅವರ ಸರ್ಕಾರದ ಅವಧಿಯಲ್ಲಿ ಪಶುಸಂಗೋಪನೆ ಮೂಲಕ ಹಾಲು ಉತ್ಪಾದಿಸುವವನಿಗೆ 5 ರೂ. ಪ್ರೋತ್ಸಾಹ ಧನ ನೀಡಲಾಗಿತ್ತು. ಆ ಕೆಲಸವನ್ನು ಬಿಜೆಪಿ ಸರ್ಕಾರ ಮಾಡಿಲ್ಲ. 

ಬಿಜೆಪಿ ಸರ್ಕಾರ ಎಲ್ಲ ಪದಾರ್ಥಗಳ ಬೆಲೆ ಏರಿಕೆ ಮಾಡಿತು. 400 ರೂ.ಇದ್ದ ಅಡುಗೆ ಅನಿಲದ ಬೆಲೆ 1000 ರೂ. ಆಗಿದೆ. ಅಡುಗೆ ಎಣ್ಣೆ ಸೇರಿದಂತೆ ಎಲ್ಲ ಬೆಲೆ ಹೆಚ್ಚಿಸಲಾಗಿದೆ. ಆ ರೀತಿ ದಿನನಿತ್ಯ ಜನ ಸಾಮಾನ್ಯರ ಜೇಬಿಗೆ ಕತ್ತರಿ ಹಾಕಲಾಗುತ್ತಿದೆ. ಆದರೆ ಈ ಸರ್ಕಾರ ರೈತನಿಗೆ ಯಾವುದಾದರೂ ಸಹಾಯ ಮಾಡಿತೇ? ಈ ಸರ್ಕಾರ ಮಹಿಳೆಯರಿಗೆ ಸ್ತ್ರೀ ಉನ್ನತಿ ನಿಧಿ ಎಂಬ ಭರವಸೆ ನೀಡಿತ್ತು. ಯಾವ ಹೆಣ್ಣುಮಗಳಿಗೆ ಸಾಮಾಜಿಕ, ಶೈಕ್ಷಣಿಕವಾಗಿ ಅನುಕೂಲವಾಗುವಂತೆ ಯಾವ ಕೊಡುಗೆ ನೀಡಿದ್ದೀರಿ. 
ಯುವಕರಿಗಾಗಿ ಹೊಸ ಉದ್ಯೋಗ ಸೃಷ್ಟಿಸವುದಾಗಿ ಹೇಳಿದ್ದರು, ಎಷ್ಟು ಉದ್ಯೋಗ ಸೃಷ್ಟಿಸಿದ್ದೀರಿ? ಹೊಸ ಪಿಯು ಕಾಲೇಜು ಸ್ಥಾಪಿಸುವುದಾಗಿ ತಿಳಿಸಿದ್ದೀರಿ. ಎಷ್ಟು ಸ್ಥಾಪಿಸಿದ್ದೀರಿ? ನಾವು ಈ ಎಲ್ಲ ಆರೋಪವನ್ನು ನಿಮ್ಮ ಪ್ರಣಾಳಿಕೆಯನ್ನೇ ಆಧಾರವಾಗಿಟ್ಟುಕೊಂಡು ಆರೋಪ ಮಾಡುತ್ತಿದ್ದೇವೆ. ಕಾಂಗ್ರೆಸ್ ಸರ್ಕಾರ ಪರಶಿಷ್ಟ ಜಾತಿ ಹಾಗೂ ಪಂಗಡಕ್ಕಾಗಿ ಬೆಳಗಾವಿ ಅಧಿವೇಶನದಲ್ಲಿ ಐತಿಹಾಸಿಕ ಕಾಯ್ದೆ ಜಾರಿಗೆ ತಂದು ಪರಿಶಿಷ್ಟ ಜಾತಿ ಹಾಗೂ ಪರಿಶಿಷ್ಟ ಪಂಡಗದವರಿಗೆ ಜನಸಂಖ್ಯೆ ಅನುಗುಣನಾಗಿ ಅನುದಾನ ನೀಡುವಂತೆ ಮಾಡಿತ್ತು. ಇದು ನಮ್ಮ ಸಿದ್ಧಾಂತ ಹಾಗೂ ಬದ್ಧತೆ. ಆದರೆ ನೀವು ಪರಿಶಿಷ್ಟ ಜಾತಿ ಹಾಗೂ ಪಂಗಡದ ವಿದ್ಯಾರ್ಥಿಗಳಿಗೆ 4,500 ಕೋಟಿ ನೀಡುವುದಾಗಿ ವಚನ ನೀಡಿದ್ದಿರಿ, ಅದು ಸಾಧ್ಯವಾಗಿದೆಯೇ? ಕನ್ನಡ ನಾಡಿನ ನುಡಿಗೆ ಆದ್ಯತೆ ನೀಡುವುದಾಗಿ ಹೇಳಿದ್ದಿರಿ. ಆದ್ಯತೆ ನೀಡಿದ್ದೀರಾ? 

ನೀವು ವಚನ ವಂಚನೆ ಮಾಡಿದ್ದು, ನಿಮ್ಮ ಪ್ರಣಾಳಿಕೆ ವಂಚನೆಗಳ ಸರಮಾಲೆ. ನೀವು ಜನರ ಮತ ಪಡೆದು ಭ್ರಷ್ಟ ಸರ್ಕಾರ ನಡೆಸಿದ್ದೀರಿ. ಭ್ರಷ್ಟಾಚಾರದಲ್ಲಿ ಕರ್ನಾಟಕ ರಾಷ್ಟ್ರ ರಾಜಧಾನಿಯನ್ನಾಗಿ ಮಾಡಿದ್ದೀರಿ. ಇಂದು ಕಾಂಗ್ರೆಸ್ ನ ಎಲ್ಲ ನಾಯಕರು ಈ ಎಲ್ಲ ಪ್ರಶ್ನೆಗಳನ್ನು ಕೇಳುತ್ತಿದ್ದು, ನಿಮ್ಮ ಹತ್ತಿರ ಇದೆಯಾ ಉತ್ತರ?
[29/08, 3:32 PM] Kpcc official: *ಜಂಟಿ ಪತ್ರಿಕಾಗೋಷ್ಠಿ ಎಐಸಿಸಿ ಪ್ರಧಾನ ಕಾರ್ಯದರ್ಶಿ ರಣದೀಪ್ ಸಿಂಗ್ ಸುರ್ಜೇವಾಲ ಅವರ ಮಾತಿನ ಸಾರಾಂಶ:*

ಬಿಜೆಪಿ ಸರ್ಕಾರ ರಾಜ್ಯದ ಜನರಿಗೆ ದ್ರೋಹ ಬಗೆದಿದೆ. ಹೀಗಾಗಿ ನಾವು ಬಿಜೆಪಿ ನಿಮ್ಮ ಹತ್ತಿರ ಇದೆಯಾ ಉತ್ತರ? ಎಂಬ ಆಂದೋಲನ ಮಾಡುತ್ತಿದ್ದೇವೆ.

ಬಿಜೆಪಿಯು ಕಳೆದ ಚುನಾವಣೆ ಸಂದರ್ಭದಲ್ಲಿ ರಾಜ್ಯದ ಜನರಿಗೆ 600ಕ್ಕೂ ಹೆಚ್ಚು ಭರವಸೆ ಅಥವಾ ವಚನಗಳನ್ನು ನೀಡಿತ್ತು. ಆದರೆ ಅವರು ಮಾತು ಕೊಟ್ಟು ಮುಂದಿನ 7-8 ತಿಂಗಳಲ್ಲಿ 5 ವರ್ಷ ಪೂರ್ಣಗೊಳ್ಳಲಿದ್ದು, ಶೇ.90ರಷ್ಟು ಭರವಸೆಗಳನ್ನು ಈಡೇರಿಸಿಲ್ಲ. ಈಡೇರಿಸುವುದಿರಲ್ಲಿ ತಾವು ಕೊಟ್ಟ ಮಾತು ಸಾಕಾರಗೊಳಿಸುವ ಕಾರ್ಯವನ್ನು ಆರಂಭಿಸಿಯೂ ಇಲ್ಲ. ಆಮೂಲಕ ಜನರಿಗೆ ದ್ರೋಹ ಬಗೆದು ವಚನಭ್ರಷ್ಟರಾಗಿದ್ದಾರೆ.

ಈ ಬಿಜೆಪಿ ಸರ್ಕಾರ ತನ್ನ ಆಡಳಿತ ಅವಧಿಯಲ್ಲಿ ನೀಡಿರುವ ಕೊಡುಗೆಗಳೆಂದರೆ, ಮಠಗಳಿಂದ ಶೇ.30ರಷ್ಟು, ಗುತ್ತಿಗೆದಾರರಿಂದ ಶೇ.40, ಬಿಜೆಪಿಯ ಸಾಮಾನ್ಯ ಕಾರ್ಯಕರ್ತರಿಂದ ಶೇ.60ರಷ್ಟು ಕಮಿಷನ್ ಆಗಿದೆ. ಮೋದಿ ಅವರ ಮಾತಿನಂತೆ ಹೇಳುವುದಾದರೆ, ಈ ಸರ್ಕಾರ ನಾಲ್ಕು Cಗಳಿಂದ ಕೂಡಿದೆ. ಅವುಗಳಿಂದರೆ, Crumbling Infrastructure (ಮೂಲಭೂತ ಸೌಕರ್ಯಗಳ ನಾಶ), Complete Policy Paralysis (ನೀತಿ ರೂಪಿಸುವಲ್ಲಿ ಸಂಪೂರ್ಣ ವೈಫಲ್ಯ), Corruption (ಭ್ರಷ್ಟಾಚಾರ), Communal Tension (ಕೋಮು ಸಂಘರ್ಷ). ಇದು ಬಿಜೆಪಿಯ ಭ್ರಷ್ಟ ಹಾಗೂ ದುರಾಡಳಿತದ ಸರ್ಕಾರದ ಕೊಡುಗೆ. 

ಬೊಮ್ಮಾಯಿ ಅವರು ರಾಜ್ಯ ರಾಜಕಾರಣದ ಇತಿಹಾಸದಲ್ಲೇ ಅತ್ಯಂತ ಬಲಹೀನಿ ಮುಖ್ಯಮಂತ್ರಿಗಳಾಗಿದ್ದು, ಇದರಿಂದ ಕರ್ನಾಟಕ ದೇಶದಲ್ಲೇ ಅತ್ಯಂತ ಭ್ರಷ್ಟ ರಾಜ್ಯವಾಗಿದೆ. ಅವರ ನಾಯಕತ್ವದ ವೈಫಲ್ಯ, ಅಸಮರ್ಥತೆ ಹೆಚ್ಚಾಗಿದೆ. ಒಂದು ಕಡೆ 2013ರಿಂದ 2018ರವರೆಗಿನ ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ಸರ್ಕಾರ 165 ಭರವಸೆಗಳ ಪೈಕಿ 158 ಭರವಸೆಗಳನ್ನು ಪೂರ್ಣಗೊಳಿಸಿದ್ದೆವು. ಉಳಿದ ಯೋಜನೆಗಳ ಕಾಮಕಾರಿ ಕೂಡ ಆರಂಭವಾಗಿತ್ತು. ಮತ್ತೊಂದು ಕಡೆ ಬಿಜೆಪಿ ಸರ್ಕಾರ 600 ಭರವಸೆಗಳ ಪೈಕಿ ಶೇ.91ರಷ್ಟು ಭರವಸೆಗಳು ಈಡೇರಿಸಲಾಗದೇ ಉಳಿದಿವೆ.

ನೀವು ಘೋಷಣೆ ಮಾಡಿದಂತೆ ಕರ್ನಾಟಕ ರಾಜ್ಯದ ರೈತರ ಸಾಲ ಮನ್ನಾ ಏನಾಯ್ತು? 
ರೈತರಿಗೆ ನೀವು ದುಪ್ಪಟ್ಟು ಬೆಂಬಲ ಬೆಲೆ ನೀಡುವುದಾಗಿ ಘೋಷಿಸಿದ್ದಿರಿ. ಅದರ ಕಥೆ ಏನಾಯ್ತು?
ಕೌಶಲ್ಯ ಅಭಿವೃದ್ಧಿ ಹಾಗೂ ಉದ್ಯೋಗ ಸೃಷ್ಟಿ ಯೋಜನೆಗಳು ಎಲ್ಲಿವೆ?   
ಮಹಿಳೆಯರಿಗೆ ಸ್ಮಾರ್ಟ್ ಫೋನ್ ನೀಡುವುದಾಗಿ ಹೇಳಿದ್ದಿರಿ, ಅದು ಎಲ್ಲಿವೆ?
ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡ, ಹಿಂದುಳಿದ ವರ್ಗ ಹಾಗೂ ಅಲ್ಪ ಸಂಖ್ಯಾತ ವಿದ್ಯಾರ್ಥಿಗಳ ವಿದ್ಯಾರ್ಥಿ ವೇತನ ಎಲ್ಲಿದೆ?
ಬಡವರ ವಸತಿ ಯೋಜನೆ ಎಲ್ಲಿ?
ಸತ್ಯಾಂಶ ಏನೆಂದರೆ, ಬಿಜೆಪಿ ರಾಜ್ಯದ ಜನರಿಗೆ ಕೇವಲ ಸುಳ್ಳನ್ನು ಹೇಳಿದೆ. ಇದರ ವಿರುದ್ಧ ನಾವು ಪ್ರಶ್ನೆ ಮಾಡುವುದನ್ನು ಮುಂದುವರಿಸುತ್ತೇವೆ.
ಕಾಂಗ್ರೆಸ್ ಅಧ್ಯಕ್ಷರಿಂದ ಹಿಡಿದು, ಸಿಎಲ್ ಪಿ ನಾಯಕರು, ಪ್ರಚಾರ ಸನಮಿತಿ ಅದ್ಯಕ್ಷರು ಸೇರಿದಂತೆ ಎಲ್ಲ ಕಾರ್ಯಕರ್ತರು ಬಿಜೆಪಿ ಸರ್ಕಾರಕ್ಕೆ ಪ್ರತಿನಿತ್ಯ ಒಂದೊಂದು ಪ್ರಶ್ನೆಯನ್ನು ಕೇಳಬೇಕು. ಬಿಜೆಪಿಯ ಡಬಲ್ ಇಂಜಿನ್ ಸರ್ಕಾರ ರಾಜ್ಯವನ್ನು ಡಬಲ್ ರೀತಿಯಲ್ಲಿ ಹಾಳು ಮಾಡಿದೆ.
[29/08, 3:33 PM] Kpcc official: ಪರಿಷ್ಕೃತ

ವಿರೋಧ ಪಕ್ಷದ ನಾಯಕರಾದ ಸಿದ್ದರಾಮಯ್ಯ ಅವರು ಇಂದು ರಾಜ್ಯ ಉಸ್ತುವಾರಿ ಎಐಸಿಸಿ ಪ್ರಧಾನ ಕಾರ್ಯದರ್ಶಿ ರಣದೀಪ್‌ ಸಿಂಗ್‌ ಸುರ್ಜೇವಾಲಾ ಹಾಗೂ ಕೆಪಿಸಿಸಿ ಅಧ್ಯಕ್ಷರಾದ ಡಿ.ಕೆ ಶಿವಕುಮಾರ್‌ ಅವರ ಜೊತೆಗೂಡಿ ಕೆಪಿಸಿಸಿ ಕಚೇರಿಯಲ್ಲಿ ಆಯೋಜಿಸಿದ್ದ ಜಂಟಿ ಪತ್ರಿಕಾಗೋಷ್ಠಿಯನ್ನು ಉದ್ದೇಶಿಸಿ ಮಾತನಾಡಿದರು:

ನಾವು 2013ರ ಚುನಾವಣೆ ವೇಳೆ ಜನರಿಗೆ 165 ಭರವಸೆಗಳನ್ನು ನೀಡಿ 158 ಭರವಸೆಗಳನ್ನು ಈಡೇರಿಸಿದ್ದೆವು, ಬಿಜೆಪಿಯವರು 2018ರ ಚುನಾವಣೆ ಸಂದರ್ಭದಲ್ಲಿ ಕರ್ನಾಟಕಕ್ಕೆ ನಮ್ಮ ವಚನಗಳು ಎಂಬ ತಲೆಬರಹದಡಿ ಸುಮಾರು 600 ಭರವಸೆಗಳನ್ನು ನೀಡಿದ್ದರು. ಅಧಿಕಾರಕ್ಕೆ ಬಂದು 3 ವರ್ಷಗಳ ನಂತರ ಎಷ್ಟು ವಚನಗಳನ್ನು ಈಡೇರಿಸಿದ್ದಾರೆ ಎಂಬುದನ್ನು ಜನರೇ ಅರ್ಥ ಮಾಡಿಕೊಳ್ಳಬೇಕು. ಈ ಭರವಸೆಗಳಲ್ಲಿ 10% ಕೂಡ ಅವರು ಈಡೇರಿಸಿಲ್ಲ. ಜನರಿಗೆ ಮಾತು ಕೊಟ್ಟ ನಂತರ ಆ ಮಾತಿನಂತೆ ನಡೆದುಕೊಳ್ಳಬೇಕು. ಆದರೆ ಈ ಸರ್ಕಾರ ಕೊಟ್ಟ ಮಾತಿಗೆ ತಪ್ಪಿ ಜನರ ನಂಬಿಕೆಗೆ ದ್ರೋಹ ಎಸಗಿದೆ. ಹಾಗಾಗಿ ನಾವು ಇದನ್ನು ವಚನ ವಂಚನೆ ಎಂದಿದ್ದೇವೆ. ಬಿಜೆಪಿಯ ಭರವಸೆಗಳನ್ನೇ ಅವರ ಮುಂದಿಟ್ಟು ಉತ್ತರಿಸುವಂತೆ ಕೇಳಿದ್ದೇವೆ, ನಮ್ಮ ಪ್ರಶ್ನೆಗಳಿಗೆ ಉತ್ತರ ಕೊಡಲಿ ನೋಡೋಣ.

ಬಾಕಿ ಇರುವ ಎಲ್ಲಾ ನೀರಾವರಿ ಯೋಜನೆಗಳನ್ನು ಪೂರ್ಣಗೊಳಿಸಲು 1.5 ಲಕ್ಷ ಕೋಟಿ ಖರ್ಚು ಮಾಡುತ್ತೇವೆ ಎಂದು ವಚನ ನೀಡಿದ್ದರು. ಕಳೆದ ಮೂರು ವರ್ಷಗಳಲ್ಲಿ ಕೇವಲ 48 ಸಾವಿರ ಕೋಟಿ ಖರ್ಚು ಮಾಡಿದ್ದಾರೆ. ಇನ್ನೂ 100 ಲಕ್ಷ ಕೋಟಿ ಎಲ್ಲಿ? ನಾವು ಅಧಿಕಾರಕ್ಕೆ ಬಂದರೆ ಐದು ವರ್ಷಗಳಲ್ಲಿ 50 ಸಾವಿರ ಕೋಟಿ ಹಣ ಖರ್ಚು ಮಾಡುತ್ತೇವೆ ಎಂದು ಜನರಿಗೆ ಭರವಸೆ ನೀಡಿದ್ದೆವು. ನಾವು ನೀರಾವರಿಗಾಗಿ 58 ಸಾವಿರ ಕೋಟಿಗೂ ಅಧಿಕ ಹಣವನ್ನು ಖರ್ಚು ಮಾಡಿದ್ದೆವು. 

ಸಹಕಾರಿ ಮತ್ತು ರಾಷ್ಟ್ರೀಕೃತ ಬ್ಯಾಂಕುಗಳಲ್ಲಿರುವ 1 ಲಕ್ಷದ ವರೆಗಿನ ರೈತರ ಸಾಲ ಮನ್ನಾ ಮಾಡುವ ಭರವಸೆ ನೀಡಿದ್ದರು. ಇದನ್ನು ಈಡೇರಿಸಿದ್ದಾರ? ಹಿಂದೊಮ್ಮೆ ಯಡಿಯೂರಪ್ಪ ಅವರು ನಮ್ಮ ಪಕ್ಷದ ನಾಯಕರಾದ ಉಗ್ರಪ್ಪನವರ ಕೇಳಿದ ಪ್ರಶ್ನೆಗೆ ಸದನದಲ್ಲಿ ಉತ್ತರಿಸುವಾಗ ರೈತರ ಸಾಲ ಮನ್ನಾ ಮಾಡಲು ನಮ್ಮ ಬಳಿ ನೋಟು ಪ್ರಿಂಟ್‌ ಮಾಡುವ ಮೆಷಿನ್‌ ಇಟ್ಟುಕೊಂಡಿದ್ದೇವಾ ಎಂದು ಹೇಳಿದ್ದರು. ಆದರೆ ಸಾಲ ಮನ್ನಾ ಮಾಡುವುದನ್ನು ರಕ್ತದಲ್ಲಿ ಬರೆದುಕೊಡ್ತೀನಿ ಎಂದು ಯಡಿಯೂರಪ್ಪ ಅವರು ಹೇಳಿದ್ದರು. ರೈತರ ಆದಾಯ ದುಪ್ಪಟ್ಟು ಮಾಡುತ್ತೇವೆ ಎಂದು ಹೇಳಿದ್ದರು. ದುಪ್ಪಟ್ಟಾಗಿದೆಯಾ? ಆದರೆ ರೈತರು ಕೃಷಿ ಕೆಲಸಗಳಿಗಾಗಿ ಮಾಡುವ ಖರ್ಚು ದುಪ್ಪಟ್ಟಾಗಿದೆ. ಈ ಸರ್ಕಾರದ ಯೋಗ್ಯತೆಗೆ ಪರಿಶಿಷ್ಟ ಜಾತಿ, ಹಿಂದುಳಿದ ಜಾತಿಗಳ ವಿದ್ಯಾರ್ಥಿಗಳ ವಿದ್ಯಾರ್ಥಿ ವೇತನ ನೀಡಿಲ್ಲ. ಎಸ್‌,ಸಿ,ಪಿ/ಟಿ,ಎಸ್‌,ಪಿ ಯೋಜನೆಗೆ ಜನಸಂಖ್ಯೆಗೆ ಅನುಗುಣವಾಗಿ ಹಣ ನೀಡಿಲ್ಲ. ಸರಿಯಾಗಿ ಈ ಯೋಜನೆಗೆ ಹಣ ಬಿಡುಗಡೆ ಆಗಿದ್ದರೆ ಈ ವರ್ಷ ಕನಿಷ್ಠ 40,000 ಕೋಟಿ ಬರಬೇಕಿತ್ತು, ಆದರೆ ಕೇವಲ 28,000 ಕೋಟಿ ಹಣ ನೀಡಿದ್ದಾರೆ. ನಮ್ಮ ಸರ್ಕಾರದ ಕೊನೆ ಬಜೆಟ್‌ ಗಾತ್ರ 2.02 ಲಕ್ಷ ಕೋಟಿ ಇತ್ತು, ಆಗ ಈ ಯೋಜನೆಗೆ 30,000 ಕೋಟಿ ಹಣ ನೀಡಿದ್ದೆವು. ಈಗ ಬಜೆಟ್‌ ಗಾತ್ರ 2.65 ಲಕ್ಷ ಕೋಟಿ ಆಗಿದೆ, ಅನುದಾನವೂ ಹೆಚ್ಚಾಗಬೇಕಿತ್ತು. ಪರಿಶಿಷ್ಟ ಸಮುದಾಯದ ಜನರಿಗೆ ಟೋಪಿ ಹಾಕಿದ್ದೀರಿ.

ಹಿಂದುಳಿದ ವರ್ಗಗಳ ಹಾಸ್ಟೆಲ್‌ ವಿದ್ಯಾರ್ಥಿಗಳಿಗೆ ಸೋಪ್, ಬ್ರಷ್, ಟೂತ್‌ಪೇಸ್ಟ್ ಒಳಗೊಂಡ ಬಾತ್‌ ರೂಮ್‌ ಕಿಟ್‌ ಹಂಚಿಕೆ ಮಾಡಲು ಆಗಿಲ್ಲ. ದೇವರಾಜ ಅರಸು ಅಭಿವೃದ್ಧಿ ನಿಗಮ, ವಾಲ್ಮೀಕಿ ಅಭಿವೃದ್ಧಿ ನಿಗಮ, ಅಲ್ಪಸಂಖ್ಯಾತರ ಅಭಿವೃದ್ಧಿ ನಿಗಮಗಳಿಗೆ ಕಳೆದ 3 ವರ್ಷಗಳಿಂದ ಹಣ ನೀಡಿಲ್ಲ. ನಮ್ಮ ಸರ್ಕಾರ ಪ್ರತೀ ನಿಗಮದಿಂದ 70-80 ಬೋರ್‌ ವೆಲ್‌ ಗಳನ್ನು ಜನರಿಗೆ ತೋಡಿಸಿಕೊಟ್ಟಿದ್ದೆವು, ಈಗ ಪ್ರತಿ ನಿಗಮದಿಂದ 1 ಬೋರ್‌ ವೆಲ್‌ ಕೊರೆಸಿಕೊಡ್ತಿದ್ದಾರೆ. ನಮ್ಮ ಸರ್ಕಾರದ 5 ವರ್ಷಗಳ ಅವಧಿಯಲ್ಲಿ 15 ಲಕ್ಷ ಮನೆಗಳನ್ನು ನಿರ್ಮಾಣ ಮಾಡಿಕೊಟ್ಟಿದ್ದೆವು, ರಾಜೀವ್‌ ಗಾಂಧಿ ವಸತಿ ಯೋಜನೆ ಪ್ರಾಧಿಕಾರದಿಂದ ಯಾರು ಬೇಕಾದರೂ ಈ ಮಾಹಿತಿ ಪಡೆದುಕೊಳ್ಳಬಹುದು. ಆದರೆ ಈ ಸರ್ಕಾರ ಬಂದಮೇಲೆ ಒಂದೇ ಒಂದು ಹೊಸ ಮನೆ ಮಂಜೂರು ಮಾಡಿ, ನಿರ್ಮಾಣ ಮಾಡಿಕೊಟ್ಟಿಲ್ಲ. ನಾವು ಬೆಂಗಳೂರು ನಗರಕ್ಕೆ 1 ಲಕ್ಷ ಮನೆ ನಿರ್ಮಾಣ ಮಾಡಬೇಕೆಂದು ಹಣ ಒದಗಿಸಿ, 1072 ಎಕರೆ ಜಮೀನನ್ನು ನೀಡಿ, ಆನ್‌ ಲೈನ್‌ ಮೂಲಕ ಅರ್ಜಿ ಕರೆದು 50,000 ಮನೆಗಳನ್ನು ಮಂಜೂರು ಮಾಡಿದ್ದೆವು, ಈ ಸರ್ಕಾರ ಬಂದಮೇಲೆ ಎಲ್ಲಾ ಅರ್ಜಿಗಳನ್ನು ವಜಾ ಮಾಡಿದೆ. ಇವತ್ತಿನವರೆಗೆ ಹೊಸದಾಗಿ ಅರ್ಜಿ ಕರೆದು ಒಂದು ಮನೆ ನೀಡಿಲ್ಲ. 

ಬಡವರಿಗೆ, ರೈತರಿಗೆ, ಯುವಕರಿಗೆ ನೀಡಿದ್ದ ಭರವಸೆಗಳನ್ನು ಈಡೇರಿಸಲಿಲ್ಲ. ಇದರ ಜೊತೆಗೆ ರಾಜ್ಯದ ಮಾನ ಹರಾಜು ಹಾಕಿದ್ದಾರೆ. ಲೂಟಿ ಹೊಡೆಯುವುದು ಬಿಟ್ಟು ಬೇರೇನು ಮಾಡುತ್ತಿಲ್ಲ. ಈ ಸರ್ಕಾರ 40% ಕಮಿಷನ್ ಸರ್ಕಾರ ಎಂದು ಹಣೆಪಟ್ಟಿ ಕಟ್ಟಿಕೊಂಡಿದೆ. ಸಾಮಾನ್ಯವಾಗಿ ಗುತ್ತಿಗೆದಾರರು ಸರ್ಕಾರದ ವಿರುದ್ಧ ಮಾತನಾಡಲ್ಲ, ಆದರೆ ಈ ಸರ್ಕಾರದ ಕಮಿಷನ್‌ ಕಿರುಕುಳ ತಾಳಲಾಗದೆ ಪ್ರಧಾನಿಗಳಿಗೆ ಎರಡನೇ ಬಾರಿ ಪತ್ರ ಬರೆಯಲು ಸಿದ್ದರಾಗಿದ್ದಾರೆ. ಪ್ರಧಾನಿಗಳಿಗೆ ಮೊದಲ ಪತ್ರ ಬರೆದು ವರ್ಷ ಆದರೂ ಅವರು ಏನು ಕ್ರಮ ಕೈಗೊಂಡಿಲ್ಲ, ಹೀಗಾಗಿ ನನ್ನನ್ನೂ ಕೂಡ ಭೇಟಿ ಮಾಡಿ ಸದನದಲ್ಲಿ ಒತ್ತಾಯ ಮಾಡಿ ಎಂದು ಮನವಿ ಮಾಡಿದ್ದರು. ಬೆಂಗಳೂರು ನಗರದಲ್ಲಿ ಕಮಿಷನ್ 40% ಇಂದ 50% ಗೆ ಹೆಚ್ಚಾಗಿದೆ. 

ಜನರಿಗೆ ಚುನಾವಣೆ ವೇಳೆ ಭರವಸೆಗಳನ್ನು ನೀಡುವುದು ಸುಮ್ಮನೆನಾ? ನಾವು ನೀಡಿದ್ದ 165 ಭರಸವೆಗಳಲ್ಲಿ 158 ಭರವಸೆಗಳನ್ನು ಈಡೇರಿಸುವ ಜೊತೆಗೆ, 30 ಹೊಸ ಯೋಜನೆಗಳನ್ನು ಜಾರಿ ಮಾಡಿದ್ದೆವು. ಬಿಜೆಪಿಯವರು ಜನರಿಗೆ ದ್ರೋಹ ಮಾಡಿ, ತೆರಿಗೆ ಹಣ ಲೂಟಿ ಮಾಡುತ್ತಿದ್ದಾರೆ. ಇದಕ್ಕೆ ಜನರು ಪ್ರಶ್ನಿಸುತ್ತಾರೆ ಎಂದು ಧಾರ್ಮಿಕ ಹಾಗೂ ಜಾತಿ ವಿಚಾರಗಳನ್ನು ಮುನ್ನೆಲೆಗೆ ತರುತ್ತಿದ್ದಾರೆ. 

ನಮ್ಮ ಸರ್ಕಾರದ ಅವಧಿಯಲ್ಲಿ ಸಾಲ ಜಾಸ್ತಿಯಾಗಿದೆ ಎಂದು ಸಿ.ಟಿ ರವಿ ಹೇಳುತ್ತಿದ್ದರು. ನಮ್ಮ ಸರ್ಕಾರದ ಕೊನೆ ಬಜೆಟ್‌ ಮಂಡಿಸಿದಾಗ ರಾಜ್ಯದ ಮೇಲಿದ್ದ ಒಟ್ಟು ಸಾಲ 2.4 ಲಕ್ಷ ಕೋಟಿ. ನಾನು ಅಧಿಕಾರಕ್ಕೆ ಬರುವ ಮೊದಲು ಈ ಸಾಲ 1.36 ಲಕ್ಷ ಕೋಟಿ ಇತ್ತು. ನಾವು ಸಾಲ ಮಾಡಿದ್ದು ಅಭಿವೃದ್ಧಿ ಯೋಜನೆಗಳು ಹಾಗೂ ಸರ್ಕಾರದ ಆಸ್ತಿ ಸೃಜನೆಗಾಗಿ. ಸಾಲ ಸಿಗುತ್ತದೆ ಎಂಬ ಕಾರಣಕ್ಕೆ ಸಾಲ ಮಾಡಿರಲಿಲ್ಲ, ನಮ್ಮ ಸಾಮರ್ಥ್ಯದ ಆದಾರದ ಮೇಲೆ ಸಾಲ ಮಾಡಿದ್ದೆವು. ನಮ್ಮನ್ನು ಟೀಕಿಸುತ್ತಿದ್ದ ಬಿಜೆಪಿ ಅಧಿಕಾರಕ್ಕೆ ಬಂದ ಮೇಲೆ ಆಗಿರುವ ಒಟ್ಟು ಸಾಲ 5 ಲಕ್ಷದ 40 ಸಾವಿರ ಕೋಟಿ. ಕೇವಲ 4 ವರ್ಷಗಳಲ್ಲಿ 3 ಲಕ್ಷ ಕೋಟಿ ಸಾಲ ಮಾಡಿದ್ದಾರೆ. ಇದನ್ನು ವಿತ್ತೀಯ ಶಿಸ್ತು ಎಂದು ಕರೆಯಲು ಆಗುತ್ತಾ? ಕಳೆದ ಒಂದೇ ವರ್ಷದಲ್ಲಿ 80 ಸಾವಿರ ಕೋಟಿ ಸಾಲ ಮಾಡಿದ್ದಾರೆ. ನಮ್ಮ ಅವಧಿಯಲ್ಲಿ ಮಾಡಿದ ಸಾಲವು ರಾಜ್ಯದ ಜಿಡಿಪಿ ಯ 25% ಒಳಗಡೆ ಇತ್ತು, ಫಿಸ್ಕಲ್‌ ಢಿಫಿಸಿಟ್‌ 3% ಒಳಗಡೆ ಇತ್ತು ಹಾಗೂ ರಾಜಸ್ವ ಉಳಿಕೆ ಇತ್ತು. ಆದರೆ ಈ ವರ್ಷ 19,000 ಕೋಟಿ ವಿತ್ತೀಯ ಕೊರತೆ ಎದುರಿಸುತ್ತಿದ್ದೇವೆ. ಸಾಲ ತಂದು ಸಂಬಳ ಕೊಡುವ ಪರಿಸ್ಥಿತಿ ಇದೆ. ಈ ವರ್ಷವೊಂದರಲ್ಲೇ 29,000 ಕೋಟಿ ಬಡ್ಡಿ, 14,000 ಕೋಟಿ ಅಸಲು ಸೇರಿ ಒಟ್ಟು 43,000 ಕೋಟಿ ಮರುಪಾವತಿ ಮಾಡಬೇಕು. ಇವೆಲ್ಲಾ ಅನವಶ್ಯಕ ಖರ್ಚುಗಳು. ಈ ಸಾಲದ ಹಣದಲ್ಲೂ 40% ಕಮಿಷನ್‌ ಹೊಡೆಯುತ್ತಿದ್ದೀರಲ್ಲಾ ನಿಮಗೆ ನಾಚಿಕೆ ಆಗಲ್ವಾ? ಅನುದಾನ ಮೀಸಲಿಡದೆ ಯೋಜನೆ ಘೊಷಣೆ ಮಾಡಿ ಅದರಲ್ಲೂ 40% ಕಮಿಷನ್‌ ಹೊಡೆಯುತ್ತಿದ್ದಾರೆ. ನನ್ನ 40 ವರ್ಷಗಳ ರಾಜಕೀಯ ಜೀವನದಲ್ಲಿ 12 ಹಣಕಾಸು ಮಂತ್ರಿ, 5 ವರ್ಷ ಮುಖ್ಯಮಂತ್ರಿಯಾಗಿ ಕೆಲಸ ಮಾಡಿದ್ದೇನೆ ಆದರೆ ಹಣ ಮೀಸಲಿಡದೆ ಯೋಜನೆ ಘೊಷಣೆ ಮಾಡಿದ್ದು ಯಾವತ್ತೂ ಕಂಡಿಲ್ಲ. ಇದೇ ಕಾರಣಕ್ಕೆ ನಾವು ಬಿಜೆಪಿಯವರೇ ನಿಮ್ಮ ಬಳಿ ಉತ್ತರ ಇದೆಯಾ ಎಂಬ ಅಭಿಯಾನ ಆರಂಭ ಮಾಡಿದ್ದೇವೆ. 

ಮಾತೆತ್ತಿದ್ದರೆ ಸಿದ್ದರಾಮಯ್ಯ ಸತ್ಯ ಹರಿಶ್ಚಂದ್ರನಾ ಎನ್ನುತ್ತಾರೆ. ಸರಿ ನಮ್ಮ ಕಾಲದಲ್ಲೂ ಹಗರಣ ನಡೆದಿದ್ದರೆ ಅದನ್ನೂ ಸೇರಿಸಿ ತನಿಖೆ ಮಾಡಿಸಿ. ಈ ಸರ್ಕಾರದ ಮೇಲಿನ ತಮ್ಮ ಆರೋಪವನ್ನು ಸಾಬೀತು ಮಾಡಲು ಆಗದಿದ್ದರೆ ಯಾವುದೇ ಕಾನೂನು ರೀತ್ಯಾ ಶಿಕ್ಷೆ ಎದುರಿಸಲು ತಾವು ಸಿದ್ಧರಿದ್ದೇವೆ ಎಂದು ಗುತ್ತಿಗೆದಾರರ ಸಂಘದವರು ಹೇಳಿದ್ದಾರೆ, ಸರ್ಕಾರ ಪ್ರಾಮಾಣಿಕವಾಗಿದ್ದರೆ ನ್ಯಾಯಾಂಗ ತನಿಖೆ ಮಾಡಿಸಲಿ. ಯಾಕೆ ಭಯ? ನಮ್ಮ ಸರ್ಕಾರದ ಅವಧಿಯಲ್ಲಿ 5 ಪ್ರಕರಣಗಳನ್ನು ಸಿಬಿಐ ಗೆ ವಹಿಸಿದ್ದೆವು. ಆಗ ಕೇಂದ್ರದಲ್ಲಿ ಬಿಜೆಪಿ ಸರ್ಕಾರ ಇತ್ತು, ಆದರೂ ನಾವು ಅಂಜಿರಲಿಲ್ಲ ಕಾರಣ ನಾವು ತಪ್ಪು ಮಾಡಿರಲಿಲ್ಲ. ನೀವು ತಪ್ಪು ಮಾಡಿಲ್ಲ ಎಂದರೆ ತನಿಖೆ ಮಾಡಿಸಿ.

ಬಿಜೆಪಿಯವರಿಗೆ ಮಾನ ಮರ್ಯಾದಿ ಇಲ್ಲ ಬಿಡಿ, ತಮ್ಮ ಜೊತೆ ರಾಜ್ಯದ ಮರ್ಯಾದಿಯನ್ನು ಹಾಳು ಮಾಡುತ್ತಿದ್ದಾರೆ. ಉದಾಹರಣೆಗೆ ಪಿಎಸ್‌ಐ ನೇಮಕಾತಿಯಲ್ಲಿ ಯಾವುದೇ ಹಗರಣ ನಡೆದಿಲ್ಲ ಎಂದು ಗೃಹ ಸಚಿವ ಆರಗ ಜ್ಞಾನೇಂದ್ರ ಸದನದಲ್ಲಿ ಹೇಳಿದ್ದರು. ಆದರೆ ಈಗ ಎಡಿಜಿಪಿ ಜೈಲು ಸೇರಿದ್ದಾರೆ. 1 ಲಕ್ಷದ 29,000 ಜನ ಪರೀಕ್ಷೆ ಎದುರಿಸಿದ್ದರು. ಇವರಲ್ಲಿ ಕೆಲವರ ಉತ್ತರ ಪತ್ರಿಕೆಗಳನ್ನು ತಿದ್ದಿದ್ದಾರೆ, ಸರ್ಕಾರದ ಕುಮ್ಮಕ್ಕಿಲ್ಲದೆ ಇದು ಸಾಧ್ಯವೇ? ಕೆಪಿಟಿಸಿಎಲ್‌ ನಲ್ಲಿ 3.50 ಲಕ್ಷ ಜನ ಪರೀಕ್ಷೆ ಎದುರಿಸಿದ್ದರು, ಅಲ್ಲೂ ದೊಡ್ಡ ಹಗರಣ ನಡೆದಿದೆ. ಈ ಬಸವರಾಜ ಬೊಮ್ಮಾಯಿ ಅತ್ಯಂತ ಅಸಮರ್ಥ ಮುಖ್ಯಮಂತ್ರಿ. ಇದೇ ಕಾರಣಕ್ಕಾಗಿ ಬಿಜೆಪಿಯ ಹಿರಿಯ ನಾಯಕ ಮಾಧುಸ್ವಾಮಿ ಅವರು ಇಲ್ಲಿ ಸರ್ಕಾರ ಇಲ್ಲ, ಕೇವಲ ಮ್ಯಾನೇಜ್‌ ಮಾಡುತ್ತಿದ್ದೇವೆ ಎಂದು ಹೇಳಿದ್ದಾರೆ. ಈಗಲೂ ತಮ್ಮ ಮಾತನ್ನು ಅವರು ತಪ್ಪು ಎಂದು ಒಪ್ಪಿಕೊಂಡಿಲ್ಲ, ಅಂದರೆ ಹೇಳಿದ್ದು ಸರಿ ಇದೆ ಅಂದಹಾಗೆ ತಾನೇ?

ಇಂಥಾ ಭ್ರಷ್ಟ ಸರ್ಕಾರಕ್ಕೆ ಕೆಲವು ಪ್ರಶ್ನೆಗಳನ್ನು ಮುಂಡಿಟ್ಟು ನಿಮ್ಮ ಬಳಿ ಉತ್ತರ ಇದೆಯಾ ಎಂದು ಕೇಳುತ್ತಿದ್ದೇವೆ. ಎಸ್.ಟಿ ಸಮುದಾಯಕ್ಕೆ 7.5 ಮೀಸಲಾತಿ ನೀಡಬೇಕೆಂಬ ವಿಚಾರದಲ್ಲಿ ನಾವು ಅಧಿಕಾರಕ್ಕೆ ಬಂದು 24 ಗಂಟೆಗಳಲ್ಲಿ ಮಾಡುತ್ತೇವೆ, ಇದನ್ನು ರಕ್ತದಲ್ಲಿ ಬರೆದು ಕೊಡುತ್ತೇವೆಂದು ಶ್ರೀರಾಮುಲು ಹೇಳಿದ್ದರು. ಏನಾಗಿದೆ ಈಗ? ಕೊಟ್ಟ ಮಾತಿನಂತೆ ನಡೆದುಕೊಂಡರಾ? ಈ ಬಿಜೆಪಿಯವರು ಮಾತೆತ್ತಿದ್ದರೆ ರಕ್ತದಲ್ಲಿ ಬರೆದುಕೊಡ್ತೀನಿ ಎನ್ನುತ್ತಾರೆ. ಇವರ ಮೈಯಲ್ಲಿ ರಕ್ತ ಇದೆಯಾ ಅನ್ನೋದೆ ಅನುಮಾನ. 

ತಮ್ಮ ವೈಫಲ್ಯಗಳನ್ನು ಮುಚ್ಚಿಡಲು ಧರ್ಮ, ಆಹಾರದ ವಿಚಾರಗಳನ್ನು ಮುಂದೆ ತರುತ್ತಾರೆ. ಸಿದ್ದರಾಮಯ್ಯ ಮಾಂಸ ತಿಂದು ದೇವಸ್ಥಾನಕ್ಕೆ ಹೋದರು ಎನ್ನುತ್ತಾರೆ. ಇಂಥಾ ಅನಗತ್ಯ ವಿಚಾರಗಳನ್ನು ಜನರ ಮುಂದಿಟ್ಟು ಅವರ ಭಾವನೆಗಳನ್ನು ಕೆರಳಿಸುವ ಕೆಲಸ ಮಾಡುತ್ತಿದ್ದಾರೆ. ದೇಶದ ಸಂವಿಧಾನ, ಪ್ರಜಾಪ್ರಭುತ್ವ ಉಳಿಯಬೇಕಾದರೆ ಬಿಜೆಪಿ ಪಕ್ಷ ಅಧಿಕಾರದಿಂದ ತೊಲಗಬೇಕು. 

ಹೀಗಾಗಿ ನಾವು ಸತ್ಯ ವಿಚಾರಗಳನ್ನು ಮುಂದಿಟ್ಟುಕೊಂಡು ಪ್ರಶ್ನೆಗಳನ್ನು ಎತ್ತಿ ಬಿಜೆಪಿ ಅವರಿಂದ ಉತ್ತರ ಕೇಳಿದ್ದೇವೆ. ಅವರ ಬಳಿ ಉತ್ತರ ಇದ್ದರೆ ನೀಡಲಿ.

Post a Comment

Previous Post Next Post