ರಾಷ್ಟ್ರಪತಿಗಳಿಗೆ ಪೌರ ಸನ್ಮಾನ ಕಾರ್ಯಕ್ರಮಮೂರು ದಿನಗಳ ಕಾಲ ರಾಜ್ಯ ಪ್ರವಾಸದಲ್ಲಿದ್ದ ರಾಷ್ಟ್ರಪತಿ ದ್ರೌಪದಿ ಮುರ್ಮು ಅವರನ್ನು ರಾಜ್ಯಪಾಲ ಥಾವರ್ ಚಂದ್ ಗೆಹ್ಲೋಟ್ ಅವರೊಂದಿಗೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಹೆಚ್.ಎ. ಎಲ್ ವಿಮಾನ ನಿಲ್ದಾಣದಲ್ಲಿ ಬೀಳ್ಕೊಟ್ಟರು.
ಕೈಗಾರಿಕಾ ಸಚಿವ ಮುರುಗೇಶ್ ನಿರಾಣಿ ಈ ಸಂದರ್ಭದಲ್ಲಿ ಹಾಜರಿದ್ದರು.
*ಬುಡಕಟ್ಟು ಜನಾಂಗದವರು ರಾಷ್ಟಪತಿ ಹುದ್ದೆಗೆ ಏರಿರುವುದು ಪ್ರಜಾಪ್ರಭುತ್ವದ ಜೀವಂತಿಕೆ ಹಾಗೂ ಜಯದ ಸಂಕೇತ.* *ಸಿಎಂ ಬೊಮ್ಮಾಯಿ*
ಬೆಂಗಳೂರು, ಸೆಪ್ಟೆಂಬರ್ 27: ಪ್ರಜಾಪ್ರಭುತ್ವದಲ್ಲಿ ಎಲ್ಲರಿಗೂ ಅವಕಾಶವಿದೆ. ಬುಡಕಟ್ಟು ಜನಾಂಗದವರು ಈ ಹುದ್ದೆಗೆ ಏರಿರುವುದು ನಮ್ಮ ಪ್ರಜಾಪ್ರಭುತ್ವದ ಜೀವಂತಿಕೆ ಹಾಗೂ ಜಯದ ಸಂಕೇತ. ಈ ಮೂಲಕ ಪ್ರಜಾಪ್ರಭುತ್ವದ ಘನತೆ ಮತ್ತು ಹಿರಿಮೆಯನ್ನು ಎತ್ತಿ ಹಿಡಿಯಲಾಗಿದೆ. ಎಂದು ಮುಖ್ಯ ಮಂತ್ರಿ ಬಸವರಾಜ ಬೊಮ್ಮಾಯಿ ತಿಳಿಸಿದರು.
ಅವರು ಇಂದು ರಾಷ್ಟ್ರಪತಿ ದ್ರೌಪದಿ ಮುರ್ಮು ಅವರಿಗೆ ವಿಧಾನ ಸೌಧದಲ್ಲಿ ಹಮ್ಮಿಕೊಳ್ಳಲಾಗಿದ್ದ ಪೌರ ಸನ್ಮಾನ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಮಾತನಾಡಿದರು.
ಪ್ರಧಾನಿ ನರೇಂದ್ರ ಮೋದಿಯವರು ರಾಷ್ಟಪತಿ ಹುದ್ದೆಗೆ ಅವರ ಹೆಸರನ್ನು ಸೂಚಿಸಿದ ಸಂದರ್ಭದಲ್ಲಿಯೂ ರಾಷ್ಟ್ರಪತಿಗಳು ತಮ್ಮೂರಿನ ದೇವಾಲಯ ಸ್ವಚ್ಛ ಮಾಡುತ್ತಿದ್ದರು. ಅವರು ರಾಷ್ಟ್ರಪತಿಗಳಾದರೂ ಬದಲಾಗಿಲ್ಲ. ಇಂಥ ರಾಷ್ಟಪತಿಗಳು ದೊರಕಿರುವಾಗ ಮಾನವೀಯತೆಯನ್ನು ಸಾರಿ ಸಾರಿ ಹೇಳುವ ಉದಾಹರಣೆಯ ಮೂಲಕ ನಮ್ಮ ಸಮಾಜ ಹಾಗೂ ದೇಶದ ಪ್ರತಿ ನಾಗರಿಕರ ಮೇಲೆ ಪ್ರಭಾವ ಬೀರಲಿದೆ. ಅವರ ಸರಳತೆ, ಬದ್ಧತೆ ಮತ್ತು ವಿಚಾರಗಳ ಮುಗ್ಧತೆ ನಮಗೆ ಮಾರ್ಗದರ್ಶನ ನೀಡುತ್ತದೆ ಎಂದರು.
*ಮಾನವೀಯ ಸ್ವರೂಪಿ ರಾಷ್ಟ್ರಪತಿಗಳು*
ಭಾರತ ಸರ್ವ ಶ್ರೇಷ್ಠ ದೇಶ. ಹಲವು ಭಾಷೆ, ಧರ್ಮ, ಜನ , ಅತಿ ಹೆಚ್ಚು ಜನಸಂಖ್ಯೆ, ಆರ್ಥಿಕ, ಸಾಮಾಜಿಕ ಬೆಳವಣಿಗೆಯ ದೇಶ. ವಿಜ್ಞಾನದ ಆವಿಷ್ಕಾರಗಳ ಮೂಲಕ ಹೊಸ ಪವಾಡಗಳನ್ನು ಕಾಣುತ್ತಿದ್ದೇವೆ. ಆಂತರಿಕ ಹಾಗೂ ಬಾಹ್ಯ ಸಂಶೋಧನೆಗಳಲ್ಲಿ ದೇಶ ಮುನ್ನುಗ್ಗುತ್ತಿದೆ. ಬದಲಾವಣೆಯ ಕಾಲದಲ್ಲಿ ಅಭಿವೃದ್ಧಿ ಏರುಗತಿಯಲ್ಲಿದೆ. ನಮಗೆ ಬೇಕಾಗಿರುವುದು ಮಾನವೀಯತೆಯ ಅಭಿವೃದ್ಧಿ. ಮಾನವೀಯ ಸ್ವರೂಪವಾಗಿ ರಾಷ್ಟ್ರಪತಿ ದ್ರೌಪದಿ ಮುರ್ಮು ಅವರಿದ್ದಾರೆ. ಇದೊಂದು ಸಂಕ್ರಮಣ ಕಾಲ. ವಿಜ್ಞಾನದ ನಗರಿ, ಜ್ಞಾನದ ನಾಡಿಗೆ ಅವರು ಆಗಮಿಸಿದ್ದಾರೆ.
ಸಮಗ್ರ ಕನ್ನಡಿಗರ ಪರವಾಗಿ ಸನ್ಮಾನಿಸಲಾಗುತ್ತಿದೆ ಎಂದರು.
*ಅಪರೂಪದ ಕಾರ್ಯಕ್ರಮ*
ಇದೊಂದು ಅಪರೂಪದ ಕಾರ್ಯಕ್ರಮ. ಕರ್ನಾಟಕ ಹಾಗೂ ವಿಧಾನಸಭೆಯ ಇತಿಹಾಸದಲ್ಲಿ ಇಂಥ ಅಪರೂಪದ ಕಾರ್ಯಕ್ರಮ ನಡೆದಿರಲಿಕ್ಕಿಲ್ಲ. ರಾಷ್ಟ್ರದ ಪ್ರಥಮ ಪ್ರಜೆಗಳಿಗೆ ನಾಗರಿಕ ಗೌರವ ಅರ್ಪಿಸುವ ಕಾರ್ಯಕ್ರಮ ಅತ್ಯಂತ ಸ್ತುತ್ಯಾರ್ಹವಾದುದು. ಬೆಂಗಳೂರಿನ ಬಗ್ಗೆ ಅವರಿಗೆ ಸದಭಿಪ್ರಾಯವಿದೆ. ಈ ಚುನಾವಣೆ ನಂತರ ಪ್ರಥಮ ಭೇಟಿ ಬೆಂಗಳೂರಿಗೆ ನೀಡಬೇಕು ಎಂಬ ಇಚ್ಛೆ ವ್ಯಕ್ತಪಡಿಸಿದ್ದರು. ಕನ್ನಡಿಗರು ಆತಿಥ್ಯದಲ್ಲಿ ಹಾಗೂ ಅತಿಥಿಗಳನ್ನು ಗೌರವದಿಂದ ಕಾಣುವ ಸಂಸ್ಕೃತಿ ಇದೆ ಎಂದು ಸ್ವಾಗತಿಸಿದ್ದೆ ಎಂದು ಸ್ಮರಿಸಿದರು. ದಸರಾ ಹಬ್ಬಕ್ಕೆ ಆಹ್ವಾನಿಸಿದ ಕೂಡಲೇ ಒಪ್ಪಿಕೊಂಡರು. ಇದು ಅವರಿಗೆ ಈ ರಾಜ್ಯದ ಬಗ್ಗೆ ಇರುವ ಪ್ರೀತಿಯನ್ನು ತೋರಿಸುತ್ತದೆ. ರಾಷ್ಟಪತಿಗಳಿಗೆ ಭಾರತ ದೇಶದ ವಿಚಾರಗಳಲ್ಲಿ ಆಳವಾದ ಜ್ಞಾನ ಹಾಗೂ ಅಪಾರ ಅನುಭವವಿದೆ. ಸ್ವತ ನೋವು ಅನುಭವಿಸಿದರು. ಬುಡ ಕಟ್ಟು ಜನಾಂಗದ ಬದುಕಿನ ಬದಲಾವಣೆ, ಸಂಸ್ಕೃತಿ ಗಳ ಬಗ್ಗೆ ಸಂಪೂರ್ಣವಾಗಿ ತಿಳಿದವರಾಗಿದ್ದಾರೆ. ಮಾನವೀಯ ಗುಣಗಳನ್ನು ಹೊಂದಿದವರು. ಶಾಲೆಯ ಶಿಕ್ಷಕರಾಗಿ ಪ್ರಾರಂಭಿಸಿ, ಮುನಿಸಿಪಲ್ ಉಪಾಧ್ಯಕ್ಷೆ
ಯಾಗಿ, ಆದರ್ಶ ಶಾಸಕರಾಗಿ, ಮಂತ್ರಿಯಾಗಿ ಸಚಿವರಾಗಿ ಕೆಲಸ ಮಾಡಿದ್ದಾರೆ. ನಂತರ 5 ವರ್ಷ ಜಾರ್ಖಂಡ್ ರಾಜ್ಯಪಾಲರಾಗಿ ಕಾರ್ಯನಿರ್ವಹಿಸಿದ್ದಾರೆ. ಬುಡಕಟ್ಟು ಜನ ಹೆಚ್ಚಿರುವ ರಾಜ್ಯದಲ್ಲಿ ಹತ್ತು ಹಲವು ಅಭಿವೃದ್ಧಿ ಕೆಲಸಗಳನ್ನು ವಿಶೇಷವಾಗಿ ಹೆಣ್ಣು ಮಕ್ಕಳಿಗಾಗಿ ಮಾಡಿದ್ದಾರೆ. ಆ 5 ವರ್ಷದ ಅನುಭವ ಅವರ ವಿನಮ್ರತೆ ಕಡಿಮೆಯಾಗಿಲ್ಲ. ರಾಜ್ಯಪಾಲರಾಗಿ ಅವಧಿ ಮುಗಿದ ಕೂಡಲೇ ಮರಳಿ ಶಿಕ್ಷಕ ವೃತ್ತಿಯನ್ನು ಕೈಗೊಂಡರು.ಉದಾತ್ತ ಮಾನವೀಯ ಗುಣಗಳನ್ನು ಬದಲಾಯಿಸದೆ ಇರುವುದು ಸರ್ವ ಶ್ರೇಷ್ಠ ಗುಣ ಎಂದರು.
ರಾಜ್ಯಪಾಲ ಥಾವರ್ ಚಂದ್ ಗೆಹ್ಲೋಟ್, ಕೇಂದ್ರ ಸಚಿವರಾದ ಶೋಭಾ ಕರಂದ್ಲಾಜೆ, ಎ. ನಾರಾಯಣಸ್ವಾಮಿ, ವಿಧಾನ ಪರಿಷತ್ ಸಭಾಪತಿ ರಘುನಾಥ್ ರಾವ್ ಮಲ್ಕಾಪುರೆ ಉಪಸ್ಥಿತರಿದ್ದರು.
Post a Comment