*ಎಫ್.ಎಂ.ಸಿ.ಜಿ ಕ್ಲಸ್ಟರ್ ಹುಬ್ಬಳ್ಳಿ ಬಂಡವಾಳ ಹೂಡಿಕೆದಾರರ ಸಮಾವೇಶ*

*ಎಫ್.ಎಂ.ಸಿ.ಜಿ ಕ್ಲಸ್ಟರ್ ಹುಬ್ಬಳ್ಳಿ ಬಂಡವಾಳ ಹೂಡಿಕೆದಾರರ ಸಮಾವೇಶ*

*ಎಫ್.ಎಂ.ಸಿ.ಜಿ ಕ್ಲಸ್ಟರ್ನಿಂದ  ರಾಜ್ಯದಲ್ಲಿ ಅಭಿವೃದ್ಧಿ ಪರ್ವ  -ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ*


ಹುಬ್ಬಳ್ಳಿ ( ಕರ್ನಾಟಕ ವಾರ್ತೆ ) ಅ.28: 

ಬೆಂಗಳೂರು ನಂತರ ಕೈಗಾರಿಕೆ ಬೆಳವಣಿಗೆಗೆ ಎಲ್ಲ ರೀತಿಯ ಸೌಲಭ್ಯವುಳ್ಳ ಹುಬ್ಬಳ್ಳಿ- ಧಾರವಾಡ ಅವಳಿ ನಗರದ ಸ್ಥಾಪಿಸಲಾಗುತ್ತಿರುವ ಎಫ್.ಎಂ.ಸಿ.ಜಿ ಕ್ಲಸ್ಟರ್ ನಲ್ಲಿ 1200 ಕೋಟಿ ಬಂಡವಾಳ ಹೂಡಿಕೆ ಹಾಗೂ ಲಕ್ಷಾಂತರ ಜನರಿಗೆ ಉದ್ಯೋಗ ನೀಡುವ ಕಾರ್ಯ ದಕ್ಷಿಣ ಭಾರತಕ್ಕೆ ಮಾದರಿಯಾಗಲಿದೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹೇಳಿದರು. 
ಅವರು ಇಂದು ಡೆನಿಸನ್ಸ ಹೊಟೇಲ್ ನಲ್ಲಿ ಕೈಗಾರಿಕೆ ಮತ್ತು ವಾಣಿಜ್ಯ ಇಲಾಖೆ, ಜಿಲ್ಲಾಡಳಿತ ಹಾಗೂ ಎಫ್.ಐ.ಸಿ.ಸಿ.ಐ ಸಹಯೋಗದಲ್ಲಿ ಆಯೋಜಿಸಿದ್ದ ಎಫ್.ಎಂ.ಸಿ.ಜಿ ಕ್ಲಸ್ಟರ್ ಹುಬ್ಬಳ್ಳಿ ಬಂಡವಾಳ ಹೂಡಿಕೆದಾರರ ಸಮಾವೇಶವನ್ನು ಉದ್ಘಾಟಿಸಿ ಮಾತನಾಡಿದರು. 
ಆರ್ಥಿಕತೆ ಎಂದರೆ ದುಡಿಮೆ. ಯಾವ ದೇಶದಲ್ಲಿ ದುಡಿಮೆ ಇರುತ್ತದೆಯೋ ಅಲ್ಲಿ ಬಡತನವಿರುವುದಿಲ್ಲ. ಕೈಗೆ ಕೆಲಸ ಕೊಡುವ ಕೈಗಾರಿಕೆಗಳಿದ್ದಲ್ಲಿ ಆ ಪ್ರದೇಶ ಬೆಳವಣಿಗೆಯಾಗುತ್ತದೆ.  ಆರ್ಥಿಕ ಹಾಗೂ ಸಾಮಾಜಿಕ ಮೌಲ್ಯ ಬೆಳೆದರೆ ದೇಶ ಪ್ರಗತಿಯತ್ತ ಸಾಗುತ್ತದೆ. ಈ ನಿಟ್ಟಿನಲ್ಲಿ ರಾಜ್ಯದ ಸರ್ವಾಂಗೀಣ ಅಭಿವೃದ್ಧಿಯಾಗಲು ಸರ್ಕಾರ ಎಲ್ಲ ರೀತಿಯ ಕ್ರಮಗಳನ್ನು ಕೈಗೊಳ್ಳುತ್ತಿದೆ ಎಂದು ಅವರು ತಿಳಿಸಿದರು. 

*ರಾಜ್ಯದ ನಾಲ್ಕು ಕಡೆ ವಿಶೇಷ ಹೂಡಿಕೆ ಪ್ರದೇಶ*
ಧಾರವಾಡ ಸೇರಿದಂತೆ ರಾಜ್ಯದ 4 ಕಡೆ ವಿಶೇಷ ಹೂಡಿಕೆ ಪ್ರದೇಶ ( ಎಸ್.ಐ.ಆರ್ ) ಕರಡು ಸಿದ್ಧಗೊಂಡಿದ್ದು, ಮುಂಬರುವ ಕ್ಯಾಬಿನೆಟ್ ನಲ್ಲಿ ಮಂಜೂರಾತಿ ಪಡೆಯಲಾಗುವುದು. ರಾಜ್ಯವು ಹಲವಾರು ಕ್ಷೇತ್ರಗಳಲ್ಲಿ ದೇಶದಲ್ಲಿಯೇ ಮುಂಚೂಣಿಯಲ್ಲಿದೆ.  ದೇಶದ 500 ಆರ್ ಆ್ಯಂಡ್ ಡಿ ಕಂಪನಿಗಳ ಪೈಕಿ 400 ಕಂಪನಿಗಳು ನಮ್ಮ ರಾಜ್ಯದಲ್ಲಿವೆ. ಆರ್ ಅ್ಯಂಡ್ ಡಿ ( ಸಂಶೋಧನೆ ಮತ್ತು ಅಭಿವೃದ್ಧಿ) ನೀತಿ ಸಹ ಪರಿಷ್ಕರಣೆಗೊಳ್ಳುವ ಹಂತದಲ್ಲಿದೆ. ಉದ್ಯೋಗ ನೀತಿಯನ್ನು ಸಹ ಯುವಕರನ್ನು ಗಮನದಲ್ಲಿಟ್ಟು ಜಾರಿಗೆ ತರಲಾಗಿದೆ. ಕಾಲಕಾಲಕ್ಕೆ ತಕ್ಕಂತೆ ಎಲ್ಲ ಕ್ಷೇತ್ರಗಳಲ್ಲಿಯೂ ಸಹ ಬದಲಾವಣೆ ತರಲಾಗುವುದು ಎಂದು ತಿಳಿಸಿದರು. 

*ಸ್ಟಾರ್ಟ್ ಅಪ್ ಗಳ ನೆರವಿಗಾಗಿ ನೂರು ಎಕರೆ ಸ್ಥಳ*
ಹುಬ್ಬಳ್ಳಿ ಧಾರವಾಡದ  ನಡುವೆ ಸ್ಟಾರ್ಟ್ ಅಪ್ ಗಳ ನೆರವಿಗಾಗಿ ನೂರು ಎಕರೆ ಸ್ಥಳವನ್ನು ಗುರುತಿಸಲಾಗುವುದು ಎಂದು ಭರವಸೆ ನೀಡಿದರು. ದೇಶದಲ್ಲಿಯೇ ಮೊದಲ ಬಾರಿಗೆ ಉದ್ಯೋಗ, ಸೆಮಿಕಂಡಕ್ಟರ್ ಮತ್ತು ಆರ್.ಅಂಡ್ ಡಿ ನೀತಿ, ರೂಪಿಸಲಾಗಿದೆ. ಸಾಮಾನ್ಯ ಮನುಷ್ಯ ರ ಜೀವನ ಮಟ್ಟ ಸುಧಾರಣೆಗೆ ಇವು ಸಹಕಾರಿಯಾಗಳಿವೆ ಎಂದರು. ಪ್ರಗತಿದಾಯಕ ಸಮಾಜ ನಿರ್ಮಾಣ ಇದರಿಂದ ಸಾಧ್ಯವಾಗಲಿದೆ ಎಂದರು.  

*ದೇಶದ ಅಭಿವೃದ್ಧಿಗೆ ಕೊಡುಗೆ*
ಎಫ್.ಎಂ.ಸಿ.ಜಿ  ಯಶಸ್ವಿಯಾದರೆ, ಕೇವಲ ಈ ಭಾಗದ ಆರ್ಥಿಕ ಅಭಿವೃದ್ಧಿ ಮಾತ್ರವಲ್ಲ,  ಇಡೀ ದೇಶದ ಅಭಿವೃದ್ಧಿಗೆ ಕೊಡುಗೆ ನೀಡಲಿದೆ. ಕೃಷಿ ಬೆಳವಣಿಗೆ ಹಾಗೂ ಅಭಿವೃದ್ಧಿಯನ್ನು ಗಮನದಲ್ಲಿಟ್ಟುಕೊಂಡು ಸೇವಾ ಕ್ಷೇತ್ರಕ್ಕೂ ಹೆಚ್ಚಿನ ಪ್ರಾಧಾನ್ಯತೆ ನೀಡಲಾಗುತ್ತಿದೆ. ಸೇವೆ ಗಳನ್ನು ಒದಗಿಸುವುದು ಹೆಚ್ಚಿರುವುದರಿಂದ ಉದ್ಯೋಕಾವಕಾಶಗಳೂ ಹೆಚ್ಚುತ್ತವೆ ಎಂದರು.  ಪ್ರಜಾಪ್ರಭುತ್ವದಲ್ಲಿ ರಾಜಕೀಯ ಇಚ್ಛಾಶಕ್ತಿ ಮುಖ್ಯ. ಇಚ್ಛಾಶಕ್ತಿ ಇದ್ದಲ್ಲಿ ಮಾತ್ರ ನಿರಂತರ ಅಭಿವೃದ್ಧಿ ಕಾಣಬಹುದಾಗಿದೆ ಎಂದರು. 

*ಉದ್ಯೋಗ ಒದಗಿಸುವ ಕೈಗಾರಿಕೆಗಳು ಅಗತ್ಯ*
ಉತ್ತರ ಕರ್ನಾಟಕ ಭಾಗದಲ್ಲಿ ಶಿಕ್ಷಣ ದ ಜೊತೆಗೆ ಉದ್ಯೋಗಾವಕಾಶಗಳು ದೊರಕಬೇಕು. ಅತಿ ಹೆಚ್ಚು ಉದ್ಯೋಗ ಒದಗಿಸುವ ಕೈಗಾರಿಕೆಗಳು ಅಗತ್ಯ. ಅದಕ್ಕೆ ಪೂರಕವಾಗಿ ನಮ್ಮ ಯುವಕರಲ್ಲಿ ಕೌಶಲ್ಯಾಭಿವೃದ್ದಿಯಾಗಬೇಕು. ಉದ್ಯೋಗ ಸೃಜನೆಯ ವಾತಾವರಣ ಸೃಷ್ಟಿಯಾಗಬೇಕು. ಕಳೆದ ಎರಡು ಮೂರು ದಶಕಗಳಲ್ಲಿ ಈ ಪ್ರಯತ್ನ ಗಳು ಫಲಪ್ರದವಾಗಿವೆ. ಈಗಾಗಲೇ ನಮ್ಮ ಸರ್ಕಾರ ಹಲವಾರು ಕ್ರಮಗಳನ್ನು ಕೈಗೊಂಡಿದೆ. ಮುಂಬೈ ಮತ್ತು ಚೆನ್ನೈ ಕಾರಿಡಾರ್ ಅಭಿವೃದ್ಧಿಗೆ ಬೆಳಗಾವಿ, ಧಾರವಾಡ, ಹಾವೇರಿ, ದಾವಣಗೆರೆ ಮತ್ತು ಚಿತ್ರದುರ್ಗಗಳಲ್ಲಿ ವಿಶೇಷ ಕೈಗಾರಿಕಾ ಟೌನ್ ಶಿಪ್ ಗಳ ನಿರ್ಮಾಣಕ್ಕೆ  ತಲಾ ಸಾವಿರ ಎಕರೆ ಪ್ರದೇಶವನ್ನು ಗುರುತಿಸಲಾಗಿದೆ. ಈಗಾಗಲೇ ಚಿತ್ರದುರ್ಗ, ಹಾವೇರಿ  ಬೆಳಗಾವಿ ಹಾಗೂ ಧಾರವಾಡದಲ್ಲಿ ಸ್ಥಳ ಗುರುತಿಸಲಾಗಿದೆ ಎಂದರು. ಬೆಂಗಳೂರಿನಿಂದ ಸಂಪರ್ಕ ಕಲ್ಪಿಸುವ ರೈಲು ಪ್ರಯಾಣಕ್ಕೆ   ಹೆಚ್ಚಿನ ಸಮಯ ಅಗತ್ಯವಿದ್ದು, ತುಮಕೂರಿನಿಂದ ದಾವಣಗೆರೆಗೆ ನೆರವಾಗಿಬಿರೈಲು ಸಂಪರ್ಕ ಕ್ಕೆ ಅನುಮೋದನೆಯಾಗಿದೆ. ಭೂ ಸ್ವಾಧೀನ ಪ್ರಕ್ರಿಯೆ ಜಾರಿಯಲ್ಲಿದೆ. ಬರುವ ದಿನಗಳಲ್ಲಿ ಅಡಿಗಲ್ಲು ಹಾಕಲಾಗುವುದು. ಹೈಸ್ಪೀಡ್ ರೈಲು ಪ್ರಾರಂಭವಾದರೆ 4 ಗಂಟೆಗಳಲ್ಲಿ ಬೆಂಗಳೂರು ತಲುಪಬಹುದು. ಮುಂದಿನ ದಿನಗಳಲ್ಲಿ ಹುಬ್ಬಳ್ಳಿ- ಧಾರವಾಡದಲ್ಲಿ.ಕೈಗಾರಿಕಾ ಅಭಿವೃದ್ಧಿ ಗೆ  ಹೆಚ್ಚಿನ ಅವಕಾಶಗಳಿವೆ ಎಂದರು. 

*ರೈಲ್ವೆ ಮಾರ್ಗ*
ಹುಬ್ಬಳ್ಳಿಯಿಂದ ಬೆಳಗಾವಿಗೆ 90 ಕೋಟಿ ರೂ.ಗಳ ವೆಚ್ಚದಲ್ಲಿ ರೈಲ್ವೆ ಮಾರ್ಗ ನಿರ್ಮಿಸಲಾಗುತ್ತಿದೆ ಎಂದರು. ರಾಜ್ಯ ಸರ್ಕಾರ ಒಟ್ಟು ವೆಚ್ಚದ  ಶೇ 50 ರಷ್ಟು ಪಾಲನ್ನು ಭರಿಸಲು ಸಿದ್ದವಿದೆ.  ರಸ್ತೆ, ಬೈಪಾಸ್ ಗಳ ಅಭಿವೃದ್ಧಿಯೂ ಆಗುತ್ತಿದೆ ಎಂದು ತಿಳಿಸಿದರು. 

*ದಕ್ಷತೆ ಹಾಗೂ ಸಮಾನತೆಯನ್ನು ಒಂದೇ ದಿಕ್ಕಿನತ್ತ ಕೊಂಡೊಯ್ಯಬೇಕಿದೆ*
ದೇಶದಲ್ಲಿ ಅಭಿವೃದ್ಧಿ ಯಾಗಲು ಕೃಷಿಯ ಕೊಡುಗೆ ಬಹಳ ಮುಖ್ಯ. ಕೃಷಿಯಲ್ಲಿ ಬೆಳವಣಿಗೆಯಾದರೆ ಉತ್ಪಾದನೆಯೂ ಹೆಚ್ಚುತ್ತದೆ. ಆರ್ಥಿಕವಾಗಿ ಅಭಿವೃದ್ಧಿ ಗೆ ಕಾರಣ ವಾಗುವವರಿವೆ ಪ್ರೋತ್ಸಾಹ. ಸಮಾಜದಲ್ಲಿ ತುಳಿತಕ್ಕೊಳಗಾದವರಿಗೆ ಅವಕಾಶಗಳನ್ನು ನೀಡಬೇಕು. ದಕ್ಷತೆ ಹಾಗೂ ಸಮಾನತೆಯನ್ನು ಒಂದೇ ದಿಕ್ಕಿನತ್ತ ಕೊಂಡೊಯ್ಯಬೇಕಿದೆ. ಇದನ್ನು ಪ್ರಧಾನಿ ನರೇಂದ್ರಮೋದಿಯವರು ಯಶಸ್ವಿಯಾಗಿ ಜಾರಿಗೊಳಿಸುತ್ತಿದ್ದಾರೆ ಎಂದರು. ಕರ್ನಾಟಕದಲ್ಲಿ ಜಲ್ ಜೀವನ್ ಮಿಷನ್ ಯೋಜನೆಗೂ ಮುನ್ನ 7 ಲಕ್ಷ ಮನೆಗಳಿಗೆ ನಲ್ಲಿ ಸಂಪರ್ಕ ವಿತ್ತು. ಮಾರ್ಚ್ 30 ರೊಳಗೆ 59 ಲಕ್ಷ ಮನೆಗಳಿಗೆ ಕುಡಿಯುವ ನೀರಿನ ವ್ಯವಸ್ಥೆ ಕಲ್ಪಿಸಲಾಗುತ್ತಿದೆ ಎಂದರು. 

*ಸಕಾರಾತ್ಮಕ ಕ್ರಮ*
ರಾಜ್ಯಕ್ಕೆ ದೇಶದಲ್ಲಿಯೇ ಅತಿ ಹೆಚ್ಚಿನ ವಿದೇಶಿ ನೇರ ಬಂಡವಾಳ ಹರಿದು ಬರುತ್ತಿದೆ. ನೀತಿ ಆಯೋಗದ ನಾವೀನ್ಯತಾ ಸೂಚ್ಯಂಕ ದಲ್ಲಿಯೂ ಕರ್ನಾಟಕ ಮೊದಲ ಸ್ಥಾನದಲ್ಲಿದೆ. ಎಸ್ ಆಪ್ ಡೂಯಿಂಗ್ ಬ್ಯುಸಿನೆಸ್  ನಲ್ಲಿ ರಾಜ್ಯ ಮುಂಚೂಣಿಯಲ್ಲಿದೆ. 5 ಲಕ್ಷ ಕೋಟಿ ಗಿಂತಲೂ ಹೆಚ್ವಿನ ಹೂಡಿಕೆ ರಾಜ್ಯದಲ್ಲಿ ಆಗುತ್ತಿದೆ. ಮೂರೂವರೆ ಲಕ್ಷ ಕೋಟಿ ವೆಚ್ಚದ ಹೂಡಿಕೆಗಳಿಗೆ  ಉನ್ನತ ಮಟ್ಟದ ಸಮಿತಿಯಲ್ಲಿ  ಅನುಮೋದನೆಯಾಗಿವೆ. ನಮ್ಮ ಸರ್ಕಾರ ಸಕಾರಾತ್ಮಕ ಕ್ರಮಗಳನ್ನು ಕೈಗೊಂಡಿದೆ. ಅಭಿವೃದ್ಧಿಯ ಚಕ್ರ ಸದಾ ಮುಂದುವರಿಯಬೇಕು ಎಂದರು. 
ಕೈಗಾರಿಕಾ ಸಚಿವ ಮುರುಗೇಶ್ ನಿರಾಣಿಯವರು ಖುದ್ದು ಉದ್ಯಮಿಯಾಗಿ ಅತಿ ಹೆಚ್ಚಿನ ಎಥನಾಲ್ ಉತ್ಪಾದನಾ ಸಾಮರ್ಥ್ಯವುಳ್ಳ ಘಟಕವನ್ನು ಹೊಂದಿದ್ದಾರೆ.  ಉದ್ಯಮಿಯಾಗು , ಉದ್ಯೋಗಿಯಾಗು ಕಾರ್ಯಕ್ರಮ ವನ್ನು ರೂಪಿಸಿದ್ದಾರೆ ಎಂದರು. 
ಇದೇ ಸಂದರ್ಭದಲ್ಲಿ ಜ್ಯೋತಿ ಲ್ಯಾಬ್ಸ್, ಯುಪ್ಲೆಕ್ಸ್, ಗೋದಾವತ್ ಫುಡ್ಸ್ ಸೇರಿದಂತೆ ಒಟ್ಟು 16 ಕಂಪನಿಗಳ ಜೊತೆ ರೂ. 1275 ಕೋಟಿ ವೆಚ್ಚದ ಒಡಂಬಡಿಕೆಗಳನ್ನು ಮಾಡಿಕೊಳ್ಳಲಾಯಿತು.

Post a Comment

Previous Post Next Post