[19/01, 2:34 PM] Kpcc official: ಹಾವೇರಿಯಲ್ಲಿ ಗುರುವಾರ ನಡೆದ ಪ್ರಜಾಧ್ವನಿ ಯಾತ್ರೆ ಸಮಾವೇಶದಲ್ಲಿ ಎಐಸಿಸಿ ಪ್ರಧಾನ ಕಾರ್ಯದರ್ಶಿ ರಣದೀಪ್ ಸಿಂಗ್ ಸುರ್ಜೆವಾಲ, ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್, ವಿಧಾನಸಭೆ ವಿರೋಧ ಪಕ್ಷದ ನಾಯಕ ಸಿದ್ಧರಾಮಯ್ಯ, ಮಾಜಿ ಸಚಿವ ಎಚ್ ಕೆ ಪಾಟೀಲ್, ವಿಧಾನ ಪರಿಷತ್ ವಿರೋಧ ಪಕ್ಷದ ನಾಯಕ ಬಿ.ಕೆ. ಹರಿಪ್ರಸಾದ್, ಕೇಂದ್ರದ ಮಾಜಿ ಸಚಿವ ಕೆ ಎಚ್ ಮುನಿಯಪ್ಪ, ಕಾರ್ಯಾಧ್ಯಕ್ಷ ಸಲೀಂ ಅಹಮದ್, ಯುವ ಕಾಂಗ್ರೆಸ್ ರಾಜ್ಯಾಧ್ಯಕ್ಷ ಮೊಹಮ್ಮದ್ ನಲಪಾಡ್, ಮುಖಂಡರಾದ ಅಲ್ಲಮ್ ವೀರಭದ್ರಪ್ಪ, ವಿಜಯ್ ಸಿಂಗ್, ಯು. ಬಿ. ಬಣಕಾರ್, ಡಿ.ಆರ್. ಪಾಟೀಲ್, ಆರ್.ಎಂ. ಕುಬೇರಪ್ಪ, ಮನೋಹರ್ ತಹಶೀಲ್ದಾರ್, ರುದ್ರಪ್ಪ ಲಮಾಣಿ, ಮಯೂರ ಜೈ ಕುಮಾರ್, ಬಸವರಾಜ್ ರಾಯರೆಡ್ಡಿ, ಸೋಮಣ್ಣ ಬೇವಿನಮರದ, ಬಿ. ಎನ್ ಶಿವಣ್ಣನವರ,ಪ್ರಕಾಶ್ ರಾಥೋಡ್ , ಪುಷ್ಪ ಅಮರನಾಥ್, ವೀಣಾ ಕಾಶಪ್ಪನವರ್, ಬನ್ನಿಕೊಡ್, ಎಸ್ ಆರ್ ಪಾಟೀಲ್, ಎಂ.ಎಂ. ಹಿರೇಮಠ್, ರಾಮಚಂದ್ರ, ಶ್ರೀನಿವಾಸ್ ಮಾನೆ ಮತ್ತಿತರರು ಭಾಗವಹಿಸಿದ್ದರು.
[19/01, 4:16 PM] Kpcc official: *ಹಾವೇರಿ ಪ್ರಜಾಧ್ವನಿ ಯಾತ್ರೆಯ ಸಮಾವೇಶದಲ್ಲಿ ಡಿ.ಕೆ. ಶಿವಕುಮಾರ್ ಅವರ ಮಾತುಗಳು*
ಇಂದು ನಾವು ಒಂದು ಉದ್ದೇಶ ಮನದಲ್ಲಿಟ್ಟುಕೊಂಡು ನಿಮ್ಮ ಮುಂದೆ ಬಂದಿದ್ದೇವೆ, ಕರ್ನಾಟಕ ರಾಜ್ಯದ ಜನರ ನೋವು, ಸಮಸ್ಯೆ, ಭಾವನೆ, ಅಭಿಪ್ರಾಯಗಳನ್ನು ಶೇಖರಿಸಿ, ನಿಮಗೆ ಶಕ್ತಿ ನೀಡುವುದೇ ಪ್ರಜಾಧ್ವನಿ ಯಾತ್ರೆ. ಚಿಕ್ಕೋಡಿ, ಬೆಳಗಾವಿ, ಬಾಗಲಕೋಟೆ, ಹೊಸಪೇಟೆ, ಕೊಪ್ಪಳ, ಗದಗ ಮುಗಿಸಿ ಇಲ್ಲಿಗೆ ಬಂದಿದ್ದೇವೆ. ಮಧ್ಯಾಹ್ನ ಕಾರ್ಯಕ್ರಮದಲ್ಲಿ ಹಾವೇರಿಯಲ್ಲಿ ಬಹಳ ದೊಡ್ಡ ಮಟ್ಟದ ಜನ ಸೇರಿದ್ದೀರಿ. ಎಲ್ಲ ಕಡೆಗಳಲ್ಲಿ ನಮಗೆ ಉತ್ತಮ ಜನ ಬೆಂಬಲ ಸಿಗುತ್ತಿದೆ. ಕಾಂಗ್ರೆಸ್ ಮಹಾ ಅಲೆಯನ್ನು ನೀವೆಲ್ಲರೂ ಆರಂಭಿಸಿದ್ದೀರಿ.
ನೀವು ಬಿಜೆಪಿಗೆ ಯಾಕೆ ಬೆಂಬಲ ನೀಡಬೇಕು? ಈ ಸರ್ಕಾರ 40% ಕಮಿಷನ್ ಪಡೆದಿದ್ದಕ್ಕಾ, ನಿರುದ್ಯೋಗ ಯುವಕರಿಗೆ ಉದ್ಯೋಗ ನೀಡಲು ಹಣ ಪಡೆದಿದ್ದಕ್ಕಾ, ಹೊಟೇಲ್ ಗಳಲ್ಲಿ ತಿಂಡಿಗಳಿಗೆ ಬೆಲೆ ನಿಗದಿ ಮಾಡಿದಂತೆ ಒಂದೊಂದು ಹುದ್ದೆಗೂ ಹಣ ನಿಗದಿ ಮಾಡಿರುವುದಕ್ಕಾ, ಕೋವಿಡ್ ಸಮಯದಲ್ಲಿ ಜನ ಸತ್ತಿದ್ದಾಕ್ಕಾ?ಅವರ ಬದುಕು ನಿರ್ನಾಮ ಮಾಡಿದ್ದಕ್ಕಾ, ರೈತರ ಆದಾಯ ಡಬಲ್ ಮಾಡದಿರುವುದಕ್ಕೆ ಬಿಜೆಪಿಗೆ ಬೆಂಬಲ ನೀಡಬೇಕಾ?
ನಾವು ಕಲ್ಯಾಣ ಕರ್ನಾಟಕದಲ್ಲಿ ಆರ್ಥಿಕ ನೀತಿ ಹಾಗೂ 5 ಸಾವಿರ ಕೋಟಿ ಅನುದಾನ ಘೋಷಿಸಿದ್ದೇವೆ. ರಾಜ್ಯದ ಮುಖ್ಯಮಂತ್ರಿಗಳು ಈ ಜಿಲ್ಲೆಯವರು. ಇತ್ತೀಚೆಗೆ ಅವರು ಜಾಗತಿಕ ಬಂಡವಾಳ ಹೂಡಿಕೆ ಸಮಾವೇಶ ಮಾಡಿದರು. ಇದರಲ್ಲಿ ರಾಜ್ಯಕ್ಕೆ 10 ಲಕ್ಷ ಕೋಟಿ ಬಂಡವಾಳ ಬರಲಿದೆ ಎಂದರು. ಬೊಮ್ಮಾಯಿ ಅವರೇ, ನೀವು ಸಿಎಂ ಆಗಿದ್ದೀರಿ, ನಿಮ್ಮ ಜಿಲ್ಲೆಗೆ ಯಾರು ಎಷ್ಟು ಬಂಡವಾಳ ಹೂಡಿಕೆ ಮಾಡಲು ಮುಂದಾಗಿದ್ದಾರೆ ಎಂಬ ಪಟ್ಟಿಯನ್ನು ಬಿಡುಗಡೆ ಮಾಡಿ.
ಯಾವುದಾದರೂ ಒಂದು ಕಾರ್ಖಾನೆ ಬಂದಿದೆಯಾ? ನಮ್ಮ ಅವಧಿಯಲ್ಲಿ ಗಾಳಿಯಲ್ಲಿ ವಿದ್ಯುತ್ ಶಕ್ತಿ ಉತ್ಪಾದನೆ ಮಾಡಲಾಗುತ್ತಿತ್ತು. ರಾಜ್ಯದಲ್ಲಿ 10 ಸಾವಿರ ಮೆ.ವ್ಯಾ. ಉತ್ಪಾದನೆಯಾಗುತ್ತಿದ್ದ ವಿದ್ಯುತ್ ಅನ್ನು 21 ಸಾವಿರ ಮೆ.ವ್ಯಾ ಗೆ ಹೆಚ್ಚಿಸಿದ್ದೇವೆ. ವಿಂಡ್ ಮಿಲ್, ಸೋಲಾರ್ ಮೂಲಕ ವಿದ್ಯುತ್ ಉತ್ಪಾದನೆ ಹೆಚ್ಚಿಸಿದ್ದೇವೆ. ಪಾವಗಡದಲ್ಲಿ ರೈತರ ಜತೆ ಒಡಂಬಡಿಕೆ ಮಾಡಿಕೊಂಡು ಅವರಿಂದ ಭೂಮಿ ಖರೀದಿ ಮಾಡದೇ, ಅವರ ಒಡೆತನದಲ್ಲೇ ಉಳಿಸಿ 14 ಸಾವಿರ ಎಕರೆಯಲ್ಲಿ ಸೋಲಾರ್ ಪಾರ್ಕ್ ನಿರ್ಮಾಣ ಮಾಡಲಾಗಿದೆ. ಇದು ಕಾಂಗ್ರೆಸ್ ಕಾರ್ಯಕ್ರಮ.
ನಾವು ಗೃಹಜ್ಯೋತಿ ಕಾರ್ಯಕ್ರಮ ಘೋಷಣೆ ಮಾಡಿದ್ದೇವೆ. ಪ್ರತಿ ಕುಟುಂಬಕ್ಕೆ 200 ಯುನಿಟ್ ವಿದ್ಯುತ್ ಉಚಿತವಾಗಿ ನೀಡಲು ನಿರ್ಧಾರಿಸಿದ್ದೇವೆ. 200 ಯುನಿಟ್ ಗೆ ಈಗಿನ ದರದಲ್ಲಿ 1500 ರೂ. ಆಗುತ್ತದೆ. ನೀವು 200 ಯುನಿಟ್ ವರೆಗೂ ವಿದ್ಯುತ್ ಬಿಲ್ ಪಾವತಿ ಮಾಡುವಂತಿಲ್ಲ. ಇದು ಕಾಂಗ್ರೆಸ್ ಪಕ್ಷದ ಗ್ಯಾರೆಂಟಿ ಯೋಜನೆ. ಈ ಯೋಜನೆ ಬಗ್ಗೆ ಅಶೋಕ್ ಹಾಗೂ ಸಚಿವ ಸುನೀಲ್ ಅವರು ಈ ವಿದ್ಯುತ್ ಎಲ್ಲಿಂದ ತರುತ್ತಾರೆ ಎಂದು ಕೇಳುತ್ತಿದ್ದಾರೆ. ಮುಖ್ಯಮಂತ್ರಿಗಳಾಗಲಿ, ಸಚಿವರಾಗಲಿ, ಯಾರಾದರೂ ಯಾವುದೇ ಮಾಧ್ಯಮ ವೇದಿಕೆ ಅಥವಾ ಬಹಿರಂಗ ವೇದಿಕೆಯಲ್ಲಿ ಚರ್ಚೆಗೆ ಬರಲಿ, ವಿದ್ಯುತ್ ಹೇಗೆ ನೀಡುತ್ತೇವೆ ಎಂದು ವಿವರಿಸುತ್ತೇವೆ. ನಾವು ಕನಕದಾಸರು, ಬಸವಣ್ಣ, ಶಿಶುನಾಳ ಶರೀಫರ ನಾಡಿನಲ್ಲಿ ಬದುಕುತ್ತಿರುವ ಜನ. ನಾವು ಕೊಟ್ಟ ಮಾತಿನಂತೆ ನಡೆಯುತ್ತೇವೆ.
ಹೆಣ್ಣು ಕುಟುಂಬದ ಕಣ್ಣು, ಹೆಣ್ಣು ದೇಶದ ಶಕ್ತಿ. ನಾವು ಎಷ್ಟೇ ದೊಡ್ಡವರಾದರೂ ತಾಯಿ, ಪತ್ನಿ, ಹೆಣ್ಣು ಮಕ್ಕಳಿಗೆ ಗೌರವ ನೀಡುತ್ತೇವೆ. ಈ ಭೂಮಿಗೆ ತಾಯಿ ಎಂದು ಪೂಜಿಸುತ್ತೇವೆ. ಭಾಷೆಯನ್ನು ಮಾತೃಭಾಷೆ ಎನ್ನುತ್ತೇವೆ. ಈ ಹೆಣ್ಣು ಅಡುಗೆ ಅನಿಲ, ಅಡುಗೆ ಎಣ್ಣೆ, ದಿನಬಳಕೆ ವಸ್ತುಗಳ ಬೆಲೆ ಏರಿಕೆಯಾಗುತ್ತಿರುವ ಹಿನ್ನೆಲೆಯಲ್ಲಿ ತತ್ತರಿಸುತ್ತಿದ್ದಾರೆ. ಕೋವಿಡ್ ನಿಂದ ಮೃತಪಟ್ಟವರಿಗೆ ಆಸ್ಪತ್ರೆ ಬಿಲ್ ನೀಡುವುದಾಗಿ ಹೇಳಿದ್ದರು. ಆದರೆ ನೀಡಲಿಲ್ಲ. ಆದರೆ ಶ್ರೀನಿವಾಸ ಮಾನೆ ಅವರು ಆಪದ್ಬಾಂದವ ಎಂಬ ಕಾರ್ಯಕ್ರಮ ಮಾಡಿ ಕೋವಿಂಡ್ ಸಂತ್ರಸ್ತರಿಗೆ ನೆರವು ನೀಡಿದರು. ನೀವು ಅವರಿಗೆ ಬೆಂಬಲ ನೀಡಿದ್ದೀರಿ. ಜನ ಕಷ್ಟದಲ್ಲಿದ್ದಾಗ ಕಣ್ಣು ತೆರೆಯದೇ, ಈಗ ನಾವು ಮಹಿಳೆಯರಿಗೆ ಗೃಹಲಕ್ಷ್ಮೀ ಯೋಜನೆ ಮೂಲಕ ಪ್ರತಿ ಕುಟುಂಬಕ್ಕೆ ತಿಂಗಳಿಗೆ 2 ಸಾವಿರದಂತೆ ವರ್ಷಕ್ಕೆ 24 ಸಾವಿರ ನೀಡುವುದಾಗಿ ಘೋಷಿಸಿದ ನಂತರ ಇವರು ಮುಂದಿನ ಬಜೆಟ್ ನಲ್ಲಿ ಮಹಿಳೆಯರಿಗೆ ಪ್ರೋತ್ಸಾಹ ಧನ ನೀಡುವುದಾಗಿ ಹೇಳಿದ್ದಾರೆ.. ನಿಮ್ಮ ಚೇರು ಖಾಲಿ ಆಗುತ್ತಿರುವ ಸಮಯದಲ್ಲಿ ನೀವು ನೀಡುತ್ತೀರಾ? ನಿಮ್ಮ ಸ್ಥಾನ ಕೇವಲ 2 ತಿಂಗಳು, ಆನಂತರ ನೀವು ಮಾಜಿ ಮುಖ್ಯಮಂತ್ರಿಗಳು. ಈ ವೇದಿಕೆ ಮೇಲೆ ಕೂತಿರುವವರ ಸರ್ಕಾರ ಬರಲಿದೆ.
ಪ್ರಧಾನಮಂತ್ರಿಗಳು ರಾಜ್ಯಕ್ಕೆ ಬಂದಿದ್ದು, ಅವರು ಗುತ್ತಿಗೆದಾರರ ಸಂಘದ ಅದ್ಯಕ್ಷ ಕೆಂಪಣ್ಣ ಅವರು 40% ಕಮಿಷನ್ ವಿಚಾರವಾಗಿ ನೀಡಿದ ದೂರಿನ ಬಗ್ಗೆ ಉತ್ತರ ನೀಡಬೇಕು. ತಾಂಡಾಗಳಿಗೆ ಸರ್ಟಿಫಿಕೇಟ್ ನೀಡಲು ಬಂದಿದ್ದಾರೆ. ತಾಂಡಾ ಗಳನ್ನು ನಿರ್ಮಿಸಿ ಕಂದಾಯ ತಾಂಡ ಎಂದು ಪರಿವರ್ತನೆ ಮಾಡಿದ್ದು ಕಾಂಗ್ರೆಸ್ ಸರ್ಕಾರ. ನೀವು ಇಂದು ಕೇವಲ ಸರ್ಟಿಫಿಕೇಟ್ ನೀಡುತ್ತಿದ್ದೀರಿ. ಆದರೆ ಈ ತಾಂಡಾಗಳನ್ನು ಮಾಡಿದ್ದು ಕಾಂಗ್ರೆಸ್. ಉಳುವವನಿಗೆ ಭೂಮಿ ಕೊಟ್ಟಿದ್ದು ಕಾಂಗ್ರೆಸ್.
ಭಾರತ ಜೋಡೋ ಪಾದಯಾತ್ರೆ ವೇಳೆ ಈ ಭಾಗದ ಜನರೂ ಭಾಗವಹಿಸಿದ್ದರು. ಈ ಸಮಯದಲ್ಲಿ ಹಿರಿಯ ಮಹಿಳೆ ಬಂದು ಸೌತೇಕಾಯಿ ತಂದು ರಾಹುಲ್ ಗಾಂಧಿ ಅವರಿಗೆ ಕೊಟ್ಟರು. ಆಗ ಆ ಮಹಿಳೆ ಇದು ನಿಮ್ಮ ಅಜ್ಜಿ ಇಂದಿರಾ ಗಾಂಧಿ ಅವರು ಕೊಟ್ಟ ಭೂಮಿಯಲ್ಲಿ ಬೆಳೆದ ಸೌತೇಕಾಯಿ ಎಂದು ಕೊಟ್ಟರು. ರೈತರಿಗೆ ಜಮಮೀನು, ಬಗರ್ ಹುಕುಂ ಸಾಗುವಳಿ, ನಿವೇಶನ, ಮನೆ, ಪಿಂಚಣಿ, ಅಂಗನವಾಡಿ ಕಾರ್ಯಕ್ರಮ, 7 ಕೆ.ಜಿ ಅಕ್ಕಿ, ಶೂ, ಹಾಲಿಗೆ ಪ್ರೋತ್ಸಾಹ ಧನ ನೀಡಿದ್ದು ಕಾಂಗ್ರೆಸ್. ಇದನ್ನು ಯಡಿಯೂರಪ್ಪ ಅಥವಾ ಬೊಮ್ಮಾಯಿ ಕೊಟ್ಟಿದ್ದಾರಾ? ಯಡಿಯೂರಪ್ಪನವರು ಒಂದು ಸೈಕಲ್ ಹಾಗೂ ಒಂದು ಸೀರೆ ಕೊಟ್ಟಿದ್ದು ಬಿಟ್ಟರೆ ಬೇರೆ ಏನು ಕೊಟ್ಟಿದ್ದಾರೆ?
ಆದರೆ ಕಾಂಗ್ರೆಸ್ ಪಕ್ಷ ನಿಮಗೆ ವಿದ್ಯುತ್ ಮೂಲಕ ವರ್ಷಕ್ಕೆ 18 ಸಾವಿರ, ಮಹಿಳೆಯರ ಭತ್ಯೆಗಾಗಿ ವರ್ಷಕ್ಕೆ 24 ಸಾವಿರ ನೀಡಲಿದೆ. ನಮ್ಮದು ಜನಧನ್ ಖಾತೆಯಂತೆ ಆಗುವುದಿಲ್ಲ. ನಿಮ್ಮ ಮನೆಯೊಡತಿಯ ಖಾತೆಗೆ ನೇರವಾಗಿ ಹಣ ಸೇರಲಿದೆ. ಬಸವಣ್ಣ, ತಾಯಿ ಭುವನೇಶ್ವರಿ, ಕನಕದಾಸರು, ಶಿಶುನಾಳ ಶರೀಫರು, ಕುವೆಂಪು ಅವರ ಆಣೆಗೂ ನಮ್ಮ ಕಾರ್ಯಕ್ರಮವನ್ನು ಜಾರಿ ಮಾಡುತ್ತೇವೆ.
ರೈತರ ಬದುಕು ಹಸನಾಗಿಸಲು ನೀರಾವರಿ ಯೋಜನೆ ಪೂರ್ಣಗೊಳಿಸಲು ಐದು ವರ್ಷಗಳಲ್ಲಿ 2 ಸಾವಿರ ಕೋಟಿಯನ್ನು ಮೀಸಲಿಡುವುದಾಗಿ ಮಾತು ಕೊಟ್ಟಿದ್ದೇವೆ. ನಿಮ್ಮ ಅಂತರ್ಜಲ ಹೆಚ್ಚಳ, ನೀರಾವರಿ ಹೆಚ್ಚಳ ಮಾಡಬೇಕು ಎಂದು ಕಾರ್ಯಕ್ರಮ ರೂಪಿಸಿದ್ದೇವೆ.
ಬಿಜೆಪಿ ಕೇವಲ ಆಶ್ವಾಸನೆ ನೀಡುತ್ತದೆ. ಬೊಮ್ಮಾಯಿ ಅವರೇ ಕಳೆದ ಬಜೆಟ್ ನಲ್ಲಿ ನೀವು ಘೋಷಣೆ ಮಾಡಿದರಲ್ಲಿ ಶೇ.50ರಷ್ಟು ಹಣವನ್ನು ಬಿಡುಗಡೆ ಮಾಡಲು ಸಾಧ್ಯವಾಗಿಲ್ಲ. ಒಬ್ಬರಿಗೆ ಉದ್ಯೋಗ ನೀಡಲಿಲ್ಲ. ಕೇವಲ ಲಂಚದಲ್ಲಿ ಲೂಟಿ ಮಾಡಿದ್ದೀರಿ. ವಿಧಾನಸೌಧದಿಂದ ಸರ್ಕಾರಿ ಕಚೇರಿವೆರೆಗೂ ಎಲ್ಲ ಕಡೆ ಲಂಚ. ನಿಮ್ಮ ತಾಲೂಕು ಕಚೇರಿಗಳಲ್ಲಿ ಕಾಸಿಲ್ಲದೇ ಯಾವುದಾದರೂ ಕೆಲಸ ಆಗುತ್ತದಾ? ನೀವು ಈ ಬೊಮ್ಮಾಯಿ ಸರ್ಕಾರವನ್ನು ಕಿತ್ತೊಗೆಯಬೇಕು. ಬೊಮ್ಮಾಯಿ ಅವರು ನಮ್ಮ ಧಮ್ಮು ತಾಕತ್ತಿನ ಬಗ್ಗೆ ಪ್ರಶ್ನೆ ಮಾಡುತ್ತಾರೆ. ಬರಲಿ, ನನಗೆ, ಸಿದ್ದರಾಮಯ್ಯ, ಹೆಚ್.ಕೆ ಪಾಟೀಲ್ ಅವರಿಗೆ ಎಷ್ಟು ಧಮ್ ಇದೆ ಎಂದು ತೋರಿಸುತ್ತೇವೆ. ನಿಮ್ಮ ಲಂಚದ ವಿಚಾರದಲ್ಲಿ ನಮ್ಮ ಧಮ್ ಇಲ್ಲ, ಬಡವರ ಬದುಕಿನಲ್ಲಿ ಬದಲಾವಣೆ ತರುವ ಧಮ್ ಇದೆ. ಜನರಿಗೆ ನೆರವಾಗಲು ನಮ್ಮ ಬಳಿ ಧಮ್ ಇದೆ.
ನಾವು ಇಲ್ಲಿಗೆ ಬರುವ ಮುನ್ನ ಬಿಜೆಪಿಯ ಪಾಪದ ಪುರಾಣ ಮಾಡಿದ್ದೇವೆ. ಈ ಪಾಪದ ಪುರಾಣವನ್ನು ನಿಮಗೆ ಕಳಿಹಿಸಿಕೊಡುತ್ತೇವೆ. ಇದನ್ನು ಮನೆ ಮನೆಗೂ ತಲುಪಿಸಬೇಕು. ಜತೆಗೆ ನಾವು ಅರ್ಜಿಯನ್ನು ಕೊಡುತ್ತೇವೆ. ಯಾರಿಗೆ ಉಚಿತ ವಿದ್ಯುತ್ ಹಾಗೂ ಮನೆಯೊಡತಿಗೆ ಪ್ರೋತ್ಸಾಹ ಧನ ಬೇಕೋ ಅವರಿಂದ ಅರ್ಜಿ ತುಂಬಿಸಿ, ಸಹಿ ಸಂಗ್ರಹಿಸಿ. ಆ ಮೂಲಕ ನಮ್ಮ ಕಾರ್ಯಕ್ರಮಗಳನ್ನು ಜನರಿಗೆ ತಲುಪಿಸಬೇಕು.
ಈಗ ಬಿಜೆಪಿಯವರು ಬಜೆಟ್ ನಲ್ಲಿ ನಾವು ಮಹಿಳೆಯರಿಗೆ ಪ್ರೋತ್ಸಾಹ ಧನ ನೀಡುವುದಾಗಿ ಹೇಳುತ್ತಿದ್ದಾರೆ. ಅಲ್ಲಮಪ್ರಭುಗಳು ಒಂದು ಮಾತು ಹೇಳಿದ್ದಾರೆ. ಕೊಟ್ಟ ಕುದುರೆ ಏರಲಾಗದೇ, ಮತ್ತೊಂದು ಕುದುರೆ ಏರಲು ಬಯಸುವವನು ವೀರನೂ ಅಲ್ಲ ಶೂರನೂ ಅಲ್ಲ. ಅದೇ ರೀತಿ ಅಧಿಕಾರ ಇದ್ದಾಗ ಜನಪರ ಕಾರ್ಯಕ್ರಮ ನೀಡದ ಬಿಜೆಪಿ ಸರ್ಕಾರ ಅಧಿಕಾರ ಅಂತ್ಯವಾಗುವ ಸಮಯದಲ್ಲಿ ಕಾರ್ಯಕ್ರಮ ಘೋಷಣೆ ಮಾಡುತ್ತಿದೆ.
ಯತ್ನಾಳ್, ವಿಶ್ವನಾಥ್, ನಿರಾಣಿ, ಯೋಗೇಶ್ವರ್ ಅವರು ಹೇಳಿಕೆಗಳನ್ನು ನೀಡಿರುವ ಬಗ್ಗೆ ಉತ್ತರವನ್ನು ನೀಡಲಿಲ್ಲ, ಅವರ ವಿರುದ್ಧ ಶಿಸ್ತುಕ್ರಮವನ್ನು ತೆಗೆದುಕೊಳ್ಳಲಿಲ್ಲ. ಇದು ಬಿಜೆಪಿ ಸಾಧನೆ. ಈ ದೊಂಬರಾಟವನ್ನು ಮಾಧ್ಯಮಗಳ ಮೂಲಕ ನೋಡುತ್ತಿದ್ದೇವೆ.
ಸಿದ್ದರಾಮಯ್ಯ ಅವರ ಮೇಲೆ ಅವಿಶ್ವಾಸ ನಿರ್ಣಯ ಮಂಡಿಸಿದಾಗ ನಾನು ಡಿವಿಜಿ ಅವರ ಸಾಲುಗಳನ್ನು ಸದನದಲ್ಲಿ ಹೇಳಿದ್ದೆ. ‘ಎದ್ದೆದ್ದು ಬೀಳುತಿಹೆ, ಗುದ್ದಾಡಿ ಸೋಲುತಿಹೆ ।
ಗದ್ದಲವ ತುಂಬಿ ಪ್ರಸಿದ್ದನಾಗುತಿಹೆ ।।
ಉದ್ಧರಿಸುವೆನು ಜಗವನೆನ್ನುತಿಹ ಸಖನೆ,
ನಿನ್ನುದ್ಧಾರವೆಷ್ಟಾಯ್ತೊ? – ಮಂಕುತಿಮ್ಮ ।।’
ಅದೇ ರೀತಿ ಬೊಮ್ಮಾಯಿ, ಈಶ್ವರಪ್ಪ, ಕಟೀಲ್ ಅವರೇ ನಿಮ್ಮ ಉದ್ಧಾರ ಎಷ್ಟಾಯ್ತು? ಮುಂದೆ ಕಾಂಗ್ರೆಸ್ 140 ಸೀಟುಗಳನ್ನು ಪಡೆದು ಅಧಿಕಾರಕ್ಕೆ ಬರಲಿದೆ. ಜನರಿಗೆ ಅಧಿಕಾರ ಸಿಗಲಿದೆ. ಹಾವೇರಿಯ 7 ಕ್ಷೇತ್ರಗಳಲ್ಲಿ ಕಾಂಗ್ರೆಸ್ ಅಭ್ಯರ್ಥಿ ಗೆಲ್ಲಬೇಕು. ಯು.ಬಿ ಬಣಕಾರ್ ಅವರು ಸುಮ್ಮನೆ ಕಾಂಗ್ರೆಸ್ ಸೇರಲು ದಡ್ಡಾರಾ? ಬಿಜೆಪಿಯಿಂದ ಕಾಂಗ್ರೆಸ್ ಸೇರಲು ಎಷ್ಟು ಮಂದಿ ಸಿದ್ಧರಿದ್ದಾರೆ ಗೊತ್ತಾ? ಶಾಸಕರುಗಳೇ ಸಿದ್ಧರಿದ್ದಾರೆ. ನನ್ನ ಹತ್ತಿರ ಜಾಗ, ಕುರ್ಚಿ ಇಲ್ಲ, ಸ್ವಲ್ಪ ಕಾಲ ಕಾಯಿರಿ ಎಂದು ನಾನೇ ತಡೆದಿದ್ದೇನೆ.
[19/01, 5:06 PM] Kpcc official: *ಹಾವೇರಿ ಪ್ರಜಾಧ್ವನಿ ಯಾತ್ರೆಯ ಸಮಾವೇಶದಲ್ಲಿ ಕಾಂಗ್ರೆಸ್ ನಾಯಕರ ಮಾತುಗಳು*
*ವಿಧಾನಸಭೆ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ*
ಕಳೆದ ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿ ಪಕ್ಷ 104 ಸ್ಥಾನಗಳಲ್ಲಿ ಜಯಗಳಿಸಿದ್ದರಿಂದ ನಮ್ಮ ರಾಜ್ಯಪಾಲರು ಯಡಿಯೂರಪ್ಪ ಅವರನ್ನು ಮುಖ್ಯಮಂತ್ರಿಯಾಗಲು ಕರೆದು, ನೀವು ಸದನದಲ್ಲಿ ಬಹುಮತ ಸಾಬೀತು ಮಾಡಬೇಕು ಎಂದಿದದ್ರು. ಯಡಿಯೂರಪ್ಪ ಅವರಿಗೆ ಬಹುಮತ ಸಾಬೀತು ಮಾಡಲು ಸಾಧ್ಯವಾಗದ್ದರಿಂದ ಕೇವಲ ಮೂರು ನಾಲ್ಕು ದಿನದಲ್ಲಿ ಮುಖ್ಯಮಂತ್ರಿ ಸ್ಥಾನವನ್ನು ಅವರು ಕಳೆದುಕೊಳ್ಳಬೇಕಾಯಿತು. ನಂತರ ಜೆಡಿಎಸ್ ಜೊತೆಸೇರಿ ನಾವು ಸಮ್ಮಿಶ್ರ ಸರ್ಕಾರ ರಚನೆ ಮಾಡಿದೆವು. ನಾವು 80 ಶಾಸಕರು ಇದ್ದರೂ ಕೂಡ 37 ಶಾಸಕರಿರುವ ಕುಮಾರಸ್ವಾಮಿ ಅವರನ್ನು ಮುಖ್ಯಮಂತ್ರಿ ಮಾಡಿದ್ದೆವು. ಇದಕ್ಕೆ ಕಾರಣ ಕೋಮುವಾದಿ ಬಿಜೆಪಿ ಪಕ್ಷ ಅಧಿಕಾರಕ್ಕೆ ಬರಬಾರದು ಎಂಬುದು. ಬಿಜೆಪಿ ಅಧಿಕಾರಕ್ಕೆ ಬಂದರೆ ಹಿಂಸೆ, ಅಸಹಿಷ್ಣುತೆ, ಸೇಡಿನ ರಾಜಕಾರಣ ಆರಂಭವಾಗುತ್ತದೆ ಎಂಬುದು ನಮ್ಮ ಆತಂಕವಾಗಿತ್ತು. ಜಾತಿ ಧರ್ಮಗಳ ಆಧಾರದ ಮೇಲೆ ಜನರನ್ನು ಕೆರಳಿಸಿ, ಸಮಾಜ ಒಡೆಯುವ ಕೆಲಸ ಮಾಡುತ್ತಾರೆ.
2 ವರ್ಷ 2 ತಿಂಗಳು ಮುಖ್ಯಮಂತ್ರಿಯಾಗಿದ್ದ ಕುಮಾರಸ್ವಾಮಿ ಅವರು ಯಡಿಯೂರಪ್ಪ ಮತ್ತು ಬಿಜೆಪಿ ನಾಯಕರ ಅನೈತಿಕ ರಾಜಕಾರಣದಿಂದ ಅಧಿಕಾರ ಕಳೆದುಕೊಂಡರು. ನಮ್ಮ ಪಕ್ಷದ 14 ಶಾಸಕರು ತಮ್ಮನ್ನು ತಾವು ಮಾರಿಕೊಂಡು, ಜನರ ಅಭಿಪ್ರಾಯಕ್ಕೆ ಬೆಲೆ ಕೊಡದೆ ಬಿಜೆಪಿ ಸೇರಿದರು. ಈ ಆಪರೇಷನ್ ಕಮಲಕ್ಕೆ ಸುಮಾರು 1,000 ಕೋಟಿ ಹಣ ಖರ್ಚಾಗಿರಬಹುದು. ಇದು ರಾಜಕೀಯ ವ್ಯಭಿಚಾರ ಎಂದು ನಾನು ಅಂದೇ ಹೇಳಿದ್ದೆ. ಹೀಗೆ ಅನೈತಿಕ ಮಾರ್ಗದಲ್ಲಿ ಸರ್ಕಾರ ರಚನೆ ಆದರೆ ಜನರಿಗೆ ಒಳ್ಳೆಯ ಕೆಲಸ ಮಾಡಲು ಸಾಧ್ಯವಿಲ್ಲ ಎಂದಿದ್ದೆ. ಆಪರೇಷನ್ ಕಮಲಕ್ಕೆ ಶಾಸಕರಿಗೆ 30 ರಿಂದ 35 ಕೋಟಿ ಹಣ ಕೊಟ್ಟಿದ್ದು ಯಡಿಯೂರಪ್ಪ ಅವರದ್ದು. ಯಡಿಯೂರಪ್ಪ ಅವರ ಮನೆಯಲ್ಲೇ ಯಾರಿಗೆ ಗುತ್ತಿಗೆ ಕೆಲಸ ಕೊಡಬೇಕು, ಯಾರಿಂದ ಎಷ್ಟು ವಸೂಲಿ ಮಾಡಬೇಕು ಎಂದು ತೀರ್ಮಾನವಾಗುತ್ತದೆ. ಇದನ್ನು ಹೇಳಿದ್ದು ಬಿಜೆಪಿಯ ಬಸನಗೌಡ ಪಾಟೀಲ್ ಯತ್ನಾಳ್. ಯತ್ನಾಳ್ ಅವರು ಕೂಡ ಮುಖ್ಯಮಂತ್ರಿ ಹುದ್ದೆಯ ಆಕಾಂಕ್ಷಿಯಾಗಿದ್ದರು. ಆದರೆ ತಮ್ಮ ಪಕ್ಷದಲ್ಲಿ ಮುಖ್ಯಮಂತ್ರಿ ಆಗಲು 3000 ಕೋಟಿ ಮತ್ತು ಸಚಿವರಾಗಲು 100 ಕೋಟಿ ಹಣ ಕೊಡಬೇಕು ಎಂದರು. ಇದೆಲ್ಲ ನಿಮ್ಮ ಸರ್ಕಾರದ ಭ್ರಷ್ಟಾಚಾರಕ್ಕೆ ಸಾಕ್ಷಿಯಲ್ವ?
ನರೇಂದ್ರ ಮೋದಿ ಅವರೇ ಬಿಜೆಪಿಯ ಬಂಡವಾಳ. ಯಾಕೆಂದರೆ ರಾಜ್ಯದ ಬಿಜೆಪಿ ಜನರಿಗೆ ಹಳಸಲಾಗಿದೆ. ನಮ್ಮದು ಭ್ರಷ್ಟ ಸರ್ಕಾರ ಆದರೂ ಕೂಡ ಮೋದಿ ಅವರನ್ನು ನೋಡಿ ಜನ ನಮಗೆ ಮತ್ತೆ ಮತ ನೀಡುತ್ತಾರೆ ಎಂಬ ಭ್ರಮೆಯಲ್ಲಿ ರಾಜ್ಯ ಬಿಜೆಪಿ ನಾಯಕರು ಇದ್ದಾರೆ. “ ನ ಖಾವೂಂಗ, ನ ಖಾನೆದೂಂಗ” ಎಂದಿದ್ದ ಮೋದಿ ಅವರು ರಾಜ್ಯ ಬಿಜೆಪಿ ನಾಯಕರಿಗೆ ಯಾಕೆ ಲಂಚ ತಿನ್ನಲು ಬಿಟ್ಟಿದ್ದೀರಿ ಮೋದಿಜೀ? ಕೆಂಪಣ್ಣ ಒಬ್ಬ ಸಾಮಾನ್ಯ ವ್ಯಕ್ತಿ ಅಲ್ಲ, ರಾಜ್ಯ ಗುತ್ತಿಗೆದಾರರ ಸಂಘದ ಅಧ್ಯಕ್ಷ. ಇವರು ಮೋದಿ ಅವರಿಗೆ ಪತ್ರ ಬರೆದಿದ್ದಾರೆ. ಹೈಕೋರ್ಟ್ ನ ಹಾಲಿ ನ್ಯಾಯಾಧೀಶರಿಂದ ತನಿಖೆ ಮಾಡಿಸಿ, ಅದಕ್ಕೆ ಅಗತ್ಯವಿರುವ ಎಲ್ಲಾ ದಾಖಲೆಗಳನ್ನು ನಾನು ಕೊಡುತ್ತೇನೆ ಎಂದು ಕೆಂಪಣ್ಣ ಅವರು ಹೇಳಿದ್ದರು. ಬೇರೆಯವರ ಧಮ್, ತಾಕತ್ ಪ್ರಶ್ನೆ ಮಾಡುವ ಬೊಮ್ಮಾಯಿ ಅವರಿಗೆ ಧಮ್, ತಾಕತ್ ಇದ್ದರೆ ನ್ಯಾಯಾಂಗ ತನಿಖೆ ಮಾಡಿಸಲಿ.
ಕಳೆದ ಹಾನಗಲ್ ಉಪಚುನಾವಣೆಯಲ್ಲಿ ಬಸವರಾಜ ಬೊಮ್ಮಾಯಿ 15 ದಿನ ಹಾನಗಲ್ ನಲ್ಲಿ ಟಿಕಾಣಿ ಹೂಡಿದ್ದರು. ಮಾವನ ಮನೆಯಲ್ಲಿ ಉಳಿದುಕೊಂಡು ಹೇಗಾದರೂ ಮಾಡಿ ಶ್ರೀನಿವಾಸ್ ಮಾನೆ ಅವರನ್ನು ಸೋಲಿಸಬೇಕು ಎಂದು ಕೆಲಸ ಮಾಡಿದ್ರು ಆದರೂ ಜನರು ನಮ್ಮ ಮಾತಿಗೆ ಬೆಲೆ ಕೊಟ್ಟು ಬಿಜೆಪಿ ಅಭ್ಯರ್ಥಿಯನ್ನು ಸೋಲಿಸಿ, ನಮ್ಮ ಮಾನೆ ಅವರನ್ನು ಗೆಲ್ಲಿಸಿದ್ರು. ಪಕ್ಕದ ಕ್ಷೇತ್ರದಲ್ಲೇ ಸೋತರೂ ಬೊಮ್ಮಾಯಿಗೆ ಇನ್ನು ಬುದ್ದಿ ಬಂದಿಲ್ಲ. ಭ್ರಷ್ಟಾಚಾರದಲ್ಲೇ ಇನ್ನೂ ಮುಳುಗಿ ಕೂತಿದ್ದಾರೆ. ದುರಂತ ಎಂದರೆ ಶಿಕ್ಷಣ ಕ್ಷೇತ್ರದ ಉಪ ಕುಲಪತಿಗಳಿಗೆ 10 ಕೋಟಿ ಲಂಚ ನಿಗದಿ ಮಾಡಿದ್ದಾರೆ.
ಪ್ರೀತಿ, ಸ್ನೇಹ, ಸಹೋದರತ್ವ ಇರಬೇಕಾದ ಜನ ಮನಸಿನಲ್ಲಿ ದ್ವೇಷ, ವೈರತ್ವ ತುಂಬಿದ್ದಾರೆ. ಒಡೆದಿರುವ ಸಮಾಜವನ್ನು ಒಂದು ಮಾಡಲು ರಾಹುಲ್ ಗಾಂಧಿ ಅವರು ಕನ್ಯಾಕುಮಾರಿಯಿಂದ ಕಾಶ್ಮೀರದ ವರೆಗೆ ಭಾರತ್ ಜೋಡೋ ಯಾತ್ರೆ ಮಾಡುತ್ತಿದ್ದಾರೆ. ಈ ತಿಂಗಳ 30 ರಂದು ಈ ಯಾತ್ರೆ ಕೊನೆಯಾಗಲಿದೆ, ನಾವು ಅಲ್ಲಿಗೆ ಹೋಗಬೇಕು ಎಂದು ಯೋಚನೆ ಮಾಡಿದ್ದೇವೆ. ರಾಹುಲ್ ಗಾಂಧಿ ಅವರು ಇಂದು ಜನರ ಮನಸಲ್ಲಿ ನೆಲೆಯೂರಿದ್ದಾರೆ. ಇಲ್ಲಿ ಬಡಜನರ, ಅಲ್ಪಸಂಖ್ಯಾತರ, ಮಹಿಳೆಯರ, ಮಕ್ಕಳ, ಕಾರ್ಮಿಕರ, ರೈತರ ವಿರೋಧಿ ಸರ್ಕಾರ ಇದೆ. ಈ ಸರ್ಕಾರ ಇರುವವರೆಗೆ ರಾಜ್ಯ ಉದ್ಧಾರವಾಗಲ್ಲ. ಸಾಲ ಮಾಡಿ ರಾಜ್ಯವನ್ನು ದಿವಾಳಿ ಮಾಡಿದ್ದಾರೆ. ಬೊಮ್ಮಾಯಿ ಅವರು ಸಾಲ ಮಾಡಿ ಹೋಳಿಗೆ ತಿನ್ನಲು ಶುರು ಮಾಡಿದ್ದಾರೆ.
ಇಂದು ಅಗತ್ಯ ವಸ್ತುಗಳ ಬೆಲೆ ಗಗನಕ್ಕೇರಿದೆ. ಇದರಿಂದ ಸಾಮಾನ್ಯ ಜನ ಬದುಕುವು ಕಷ್ಟವಾಗಿದೆ. ಗ್ಯಾಸ್ ಹಾಗೂ ದಿನಸಿ ಕೊಳ್ಳಲು ಬಡವರಿಗೆ ಕಷ್ಟವಾಗುತ್ತದೆ ಎಂದು ನಾವು ಕುಟುಂಬದ ಯಜಮಾನಿಗೆ ತಿಂಗಳಿಗೆ 2000 ರೂ. ನೀಡುವ ಗೃಹಲಕ್ಷ್ಮಿ ಯೋಜನೆಯನ್ನು ಘೋಷಣೆ ಮಾಡಿದ್ದೇವೆ, ನಾವು ನುಡಿದಂತೆ ನಡೆಯುವವರು. ಬಡವ ಬಲ್ಲಿದನೆನ್ನದೆ ಪ್ರತೀ ಮನೆಗೆ 200 ಯುನಿಟ್ ವಿದ್ಯುತ್ ನೀಡುವ ಯೋಜನೆ ಘೋಷಣೆ ಮಾಡಿದ್ದೇವೆ. ಈ ಎಲ್ಲಾ ಯೋಜನೆಗಳು ನಿಮಗೆ ಬೇಕು ಎನ್ನುವುದಾದರೆ ಜನಪರವಾದ ಕಾಂಗ್ರೆಸ್ ಪಕ್ಷಕ್ಕೆ ತಾವೆಲ್ಲ ಬೆಂಬಲ ನೀಡಿ, ಮುಂಬರುವ ಚುನಾವಣೆಯಲ್ಲಿ ನಮ್ಮ ಅಭ್ಯರ್ಥಿಗಳನ್ನು ಗೆಲ್ಲಿಸಿಕೊಡಬೇಕು ಎಂದು ತಮ್ಮಲ್ಲಿ ಕೈಮುಗಿದು ಮನವಿ ಮಾಡುತ್ತೇನೆ.
ಯಡಿಯೂರಪ್ಪ ಅವರು ಮುಖ್ಯಮಂತ್ರಿಯಾಗಿದ್ದಾಗ ಇಲ್ಲಿನ ರೈತರು ಗೊಬ್ಬರ, ಬೀಜ, ಔಷಧಿ ಕೇಳಿದ್ದಕ್ಕೆ ಗೋಲಿಬಾರ್ ಮಾಡಿಸಿ, ಅಮಾಯಕ ರೈತರನ್ನು ಕೊಂದರು. ಕರ್ನಾಟಕ ಭೂಸುಧಾರಣಾ ಕಾಯ್ದೆಗೆ ತಿದ್ದುಪಡಿ ತಂದು ಲಂಬಾಣಿ ತಾಂಡಗಳು, ಗೊಲ್ಲರ ಹಟ್ಟಿಗಳು ಹೀಗೆ ದಾಖಲೆ ರಹಿತ ಜನವಸತಿ ಪ್ರದೇಶಗಳನ್ನು ಕಂದಾಯ ಗ್ರಾಮಗಳಾಗಿ ಪರಿವರ್ತಿಸಿ, ಅವರಿಗೆ ಭೂಒಡೆತನ ಹಕ್ಕು ನೀಡಿದ್ದು ನಮ್ಮ ಸರ್ಕಾರ. ಬಿಜೆಪಿಯವರು ಓಟಿನಾಸೆಗೆ ಇದನ್ನು ತಾವು ಮಾಡಿದ್ದು ಎನ್ನುತ್ತಿದ್ದಾರೆ. ಲಂಬಾಣಿ ಜನರ ಆರಾಧ್ಯ ವ್ಯಕ್ತಿ ಸಂತ ಸೇವಾಲಾಲ್ ಅವರ ಜಯಂತಿಯನ್ನು ಸರ್ಕಾರದಿಂದ ಆಚರಣೆ ಮಾಡಲು ಆರಂಬಿಸಿದವರು ನಾವು. ಸೇವಾಲಾಲ್ ಹುಟ್ಟಿದ ಜಾಗವನ್ನು ಅಭಿವೃದ್ಧಿ ಮಾಡಲು 130 ಕೋಟಿ ರೂ. ಹಣ ನೀಡಿದ್ದು ನಮ್ಮ ಸರ್ಕಾರ.
ಸಂತೋಷ್ ಪಾಟೀಲ್ ಅವರ ಸಾವಿಗೆ ಕಾರಣರಾದ ಈಶ್ವರಪ್ಪ ಅವರಿಗೆ ಮೂರೇ ತಿಂಗಳಲ್ಲಿ ಪೊಲೀಸರ ಮೂಲಕ ಬಿ ರಿಪೋರ್ಟ್ ಹಾಕಿಸಿದ್ರು. ಹೀಗೆ ಹಲವು ಜನ ಸರ್ಕಾರದ ಲಂಚಕ್ಕೆ ಬೇಸತ್ತು ಆತ್ಮಹತ್ಯೆ ಮಾಡಿಕೊಂಡರು. ಈ ಸರ್ಕಾರ ಗುತ್ತಿಗೆದಾರರಿಗೆ ಕೊಡಬೇಕಾದ 25,000 ಕೋಟಿ ಹಣವನ್ನು ಬಾಕಿ ಇಟ್ಟುಕೊಂಡಿದೆ ಎಂಬ ಕಾರಣಕ್ಕೆ ನಿನ್ನೆ ಗುತ್ತಿಗೆದಾರರ ಸಂಘದವರು ಪ್ರತಿಭಟನೆ ಮಾಡಿದ್ರು. ಈ ಸರ್ಕಾರದಲ್ಲಿ ಬರೀ ಲಂಚ, ಲಂಚ, ಲಂಚ ಮಾತ್ರ ಇದೆ. ಇಂಥಾ ಭ್ರಷ್ಟ ಸರ್ಕಾರ ನಿಮಗೆ ಬೇಕಾ ಬೇಡ್ವಾ ಎಂದು ರಾಜ್ಯದ ಜನ ತೀರ್ಮಾನ ಮಾಡಬೇಕು.
*ವಿಧಾನ ಪರಿಷತ್ ವಿರೋಧ ಪಕ್ಷದ ನಾಯಕ ಬಿ.ಕೆ. ಹರಿಪ್ರಸಾದ್*
ಮುಖ್ಯಮಂತ್ರಿ ಜಿಲ್ಲೆಯಲ್ಲಿ ಇಷ್ಟು ಜನಸಾಗರ ಸೇರಿದೆ ಎಂದರೆ ಮುಖ್ಯಮಂತ್ರಿಗಳು ಹಾಗೂ ಅವರ ಸರ್ಕಾರ ಎಷ್ಟು ಜನಪ್ರಿಯವಾಗಿದೆ ಎಂದು ತಿಳಿಯುತ್ತದೆ. ನಿಮ್ಮ ಈ ಬೆಂಬಲಕ್ಕೆ ಶತಕೋಟಿ ನಮನ ಸಲ್ಲಿಸುತ್ತೇನೆ. ಪ್ರಜಾಧ್ವನಿ ಮೂಲ ಉದ್ದೇಶ ಕರ್ನಾಟಕದಲ್ಲಿ ಬಿಜೆಪಿ ಸರ್ಕಾರ ನಾಲ್ಕು ವರ್ಷಗಳ ಆಡಳಿತ ಮಾಡಿ ಈಗ ಪರಿಕ್ಷೆ ಎದುರಿಸಲಿದೆ. ಈ ಪರೀಕ್ಷೆಯಲ್ಲಿ ನೀವು ಹಣೆಬರಹ ಬರೆಯಲಿದ್ದೀರಿ. ಕಾಂಗ್ರೆಸ್ ಸರ್ಕಾರ ಅಧಿಕಾರದಲ್ಲಿದ್ದಾಗ ಹಾಗೂ ನೀವು ಕಷ್ಟದಲ್ಲಿದ್ದಾಗ ಕಾಂಗ್ರೆಸ್ ಹೇಗೆ ಸ್ಪಂದಿಸಿದೆ ಎಂಬುದನ್ನು ಅರಿತು ನೀವು ಹಣೆಬರಹ ಬರೆಯಬೇಕಾಗುತ್ತದೆ.
ಈ ಪರೀಕ್ಷೆ ರಾಜ್ಯ ಹಾಗೂ ರಾಷ್ಟರದ ಭವಿಷ್ಯ ಅಡಗಿದೆ. ಅದೃಷ್ಟವೋ, ದುರಾದೃಷ್ಟವೋ, ಬಿಜೆಪಿ ಅಧಿಕಾರಕ್ಕೆ ಬಂದಾಗಲೆಲ್ಲಾ ಹಾವೇರಿ ಜಿಲ್ಲೆಯಲ್ಲಿ ಯಾವುದಾದರೂ ಅನಾಹುತ ನಡೆಯುತ್ತದೆ. ಹೆಚ್.ಕೆ ಪಾಟೀಲ್ ಅವರು ಹೇಳಿದಂತೆ ಯಡಿಯೂರಪ್ಪ ಅವರು ಮೊದಲು ಸಿಎಂ ಆದಾಗ ರೈತರ ಮೇಲೆ ಗೋಲಿಬಾರ್ ನಡೆದು 6 ಮಂದಿ ಪ್ರಾಣ ಕಳೆದುಕೊಂಡರು. ರೈತರ ತಪ್ಪೇನು ಎಂದರೆ ಗೊಬ್ಬರ ಬೆಲೆ ಏಱಿಕೆಯಾಗಿದೆ, ನಮಗೆ ಸಿಗುತ್ತಿಲ್ಲ ಎಂದು ಆಗ್ರಹಿಸಿದಾಗ ಗೋಲಿಬಾರ್ ಮಾಡಿದರು. ಸಿದ್ದರಾಮಯ್ಯ ಹಾಗೂ ಶಿವಕುಮಾರ್ ಅವರು ತೀವ್ರ ಹೋರಾಟ ಮಾಡಿದಾಗ ನಾವು ವಿಚಾರಣೆ ಮಾಡುತ್ತೇವೆ ಎಂದರು. ವಿಚಾರಣೆ ಮಾಡಿ ರೈತರಿಗೆ ಗಾಯದ ಮೇಲೆ ಬರೆ ಹಾಕಿದರು. ರೈತರನ್ನು ಗೂಂಡಾಗಳು ಎಂದು ಹೇಳಿದ ನೀತಿಗೆಟ್ಟ ಸರ್ಕಾರ ಇದು.
ಹಾವೇರಿ ಜಿಲ್ಲೆ ರಾಜ್ಯದಲ್ಲಿ ಮಾತ್ರವಲ್ಲ ರಾಷ್ಟ್ರದಲ್ಲಿ ಬಾವೈಕ್ಯತೆಗೆ ಸಾಕ್ಷಿಯಾಗಿರುವ ಜಿಲ್ಲೆ, ಶಿಶುನಾಳ ಷರೀಫರು, ಪಂಚಾಕ್ಷರಿ ಗವಾಯ್, ಗಂಗೂಬಾಯಿ ಹಾನಗಲ್, ಕನಕದಾಸರು, ನಾಸು ಹರ್ಡಿಕರ್ ಅವರ ಊರಿದು. ಆದರೆ ಈ ಜಿಲ್ಲೆ ಈಗ ಕುಖ್ಯಾತಿಗೆ ಸಿಲುಕಿದೆ. ಈಗ ಬೊಮ್ಮಾಯಿ ಅವರು ಏನು ಮಾಡುತ್ತಿದ್ದಾರೆ ನೋಡಿ. ಅವರು ಸಿದ್ದರಾಮಯ್ಯ ಅವರ ಗರಡಿಯಲ್ಲಿ ಬೆಳೆದವರು. ಸಮಾಜವಾದದ ಹಿನ್ನೆಲೆಯಲ್ಲಿದ್ದವರು. ಸಿದ್ದರಾಮಯ್ಯ ಅವರು ಸಿದ್ಧಾಂತದ ಜತೆ ರಾಜಿ ಆಗಲಿಲ್ಲ. ಬೊಮ್ಮಾಯಿ ಅವರು ಅಧಿಕಾರಕ್ಕಾಗಿ ಸಮಾಜವಾದದಿಂದ ಕೋಮುವಾದಕ್ಕೆ ಪರಿವರ್ತನೆಗೆ ಆಗಿದ್ದಾರೆ.
ಹಿಂದುತ್ವ ಹಾಗೂ ಹಿಂದೂ ಧರ್ಮ ಇರುವ ವ್ಯತ್ಯಾಸ ಎಂದರೆ ಬಿಜೆಪಿಗೆ ಸುಳ್ಳೇ ಮನೆ ದೇವರು ಎನ್ನುವಂತೆ, ಹಿಂದುತ್ವ ಎಂಬುದೇ ಸುಳ್ಳು. ಹಿಂಸೆ ಅವರ ಸಿದ್ಧಾಂತ. ಹಿಂದೂ ಧರ್ಮದ ಸಿದ್ಧಾಂತ ಎಂದರೆ ಗಾಂಧಿ ಹಾಗೂ ವಿವೇಕಾನಂದರು ಹೇಳಿರುವಂತಹ ಅಹಿಂಸೆ ತತ್ವದ ಮೇಲೆ ನಿಂತಿದೆ. ಇದನ್ನು ಕಾಂಗ್ರೆಸ್ ಪಾಲಿಸುತ್ತಾ ಬಂದಿದೆ. ಈ ಪವಿತ್ರ ನಾಡಿನಲ್ಲಿ ನಾವು ಪ್ರಜಾಧ್ವನಿ ಮಾಡುತ್ತಿದ್ದೇವೆ.
ಹಲವಾರು ಧ್ರಮ, ಭಾಷೆ, ಜಾತಿ, ಪ್ರಾಂತ್ಯಗಳಿದ್ದರೂ ನಾವೆಲ್ಲರೂ ಒಂದು ಎನ್ನುವ ತತ್ವವನ್ನು ನಾವು ಈ ಪುಣ್ಯಭೂಮಿಯಲ್ಲಿ ಸಾರಬೇಕಿದೆ. ನಮ್ಮ ಧರ್ಮ, ನಮ್ಮ ಜವಾಬ್ದಾರಿ ಭಾವೈಕ್ಯತೆಯನ್ನು ಕಾಪಾಡಬೇಕು. ನೀವು ಎಂತಹ ಮಹಾನುಭಾವರನ್ನು ಆರಿಸಿದ್ದೀರಿ. ಬೊಮ್ಮಾಯಿ ಅವರು ಮೋದಿ ಅವರ ಜತೆ ಸುಳ್ಳು ಹೇಳುವುದರಲ್ಲಿ ಸ್ಪರ್ಧೆಗೆ ಇಳಿದಿದ್ದಾರೆ.
ಇನ್ನೊಬ್ಬ ಪಕ್ಷದ ಕ್ಷೇತ್ರದ ಶಾಸಕರು ಹಿಂದೆ ಪೊಲೀಸ್ ಆಗಿದ್ದರು. ಯಶವಂತಪುರ ಠಾಣೆಯಲ್ಲಿ ಅವರಿಗೆ ಪೊರಕೆ, ಚಪ್ಪಲಿಯಲ್ಲಿ ಹೊಡೆದು ಓಡಿಸಿದರು. ನಂತರ ಸಿನಿಮಾ ಮಾಡಿ ತಾನು ದೊಡ್ಡ ಚಿತ್ರನಟ ಎಂದು ಬೀಗುತ್ತಿರುವ ವ್ಯಕ್ತಿ ತನ್ನನ್ನೇ ತಾನು ಮಾರಿಕೊಂಡರು. ಅವರು ಕೇವಲ ತಮ್ಮನ್ನು ತಾವು ಮಾರಿಕೊಂಡಿಲ್ಲ. ಮತದಾರರನ್ನು ಮಾರುವ ನೀಚ ಕೆಲಸ ಮಾಡಿದ್ದಾರೆ. ಎಂತಹ ಜಿಲ್ಲೆಯನ್ನು ಯಾವ ಮಟ್ಟಕ್ಕೆ ತಂದಿದ್ದಾರೆ. ಇನ್ನು ಅವರು ಯಡಿಯೂರಪ್ಪ ಅವರಿಗೆ ಫೋನ್ ಮಾಡಿ ಎಷ್ಟು ಕೊಡುತ್ತೀರಾ ಎಂಬ ದೂರವಾಣಿ ಸಂಭಾಷಣೆ ಕೂಡ ಇದೆ.
ಕಾಂಗ್ರೆಸ್ ಪಕ್ಷ ನಿರಂತರವಾಗಿ ಇಷ್ಟು ವರ್ಷ ಆಡಳಿತ ಮಾಡಿದರೂ ಯಾರೊಬ್ಬರೂ ಒಂದು ಸಂಭಾಷಣೆ, ಲಂಚದ ಪ್ರಕರಣದಲ್ಲಿ ಸಿಕ್ಕಿಬಿದ್ದಿಲ್ಲ. ಇವರು ಒಬ್ಬರಾದ ಮೇಲೆ ಒಬ್ಬರಂತೆ ಲಂಚ ಮಾಡುತ್ತಿದ್ದಾರೆ.
ವಿಶ್ವದ ಮಹಾಗುರು ಎನಿಸಿಕೊಂಡಿರುವ, ಸುಳ್ಳಿನ ಸರದಾರ ಮೋದಿ ಅವರು ರಾಜ್ಯಕ್ಕೆ ಬರುತ್ತಿದ್ದಾರೆ. ಇಂದು ಕಲಬುರ್ಗಿಗೆ ಲಗ್ಗೆ ಎಂದು ಹೇಳುತ್ತಿದ್ದಾರೆ. ನಾವು 60 ಕೋಟಿ ಕೊಟ್ಟು ದಕ್ಷಿಣ ಆಫ್ರಿಕಾದಲ್ಲಿ 30 ಚಿರತೆ ಕಳಿಸಲು ಮನಮೋಹನ್ ಸಿಂಗ್ ಸರ್ಕಾರ ಹಣ ಕಟ್ಟಿತ್ತು. ಆ ಚಿರತೆ ಅಧೃಷ್ಟವೋ ದುರಾದೃಷ್ಟವೋ ಈತನ ಸಮಯದಲ್ಲಿ 6 ತಿಂಗಳ ಹಿಂದೆ ಭಾರತಕ್ಕೆ ಬಂದಿವೆ. ಚಿರತೆಯನ್ನು ಕಾಡಲ್ಲಿ ಬಿಡುವುದಕ್ಕೂ ಮಾಧ್ಯಮಗಳನ್ನು ಕರೆದುಕೊಂಡು ಹೋಗಿ ಪ್ರಚಾರ ಮಾಡಿದ್ದರು. ಈ ವ್ಯಕ್ತಿ ಮಹದಾಯಿ ಯೋಜನೆ ಕುರಿತು ಹುಬ್ಬಳ್ಳಿಯಲ್ಲಿ ನಾವು ಸಭೆ ಮಾಡಲು ಮುಂದಾದಾಗ ಮಹದಾಯಿಗೆ ಒಪ್ಪಿಗೆ ನೀಡಿರುವುದಾಗಿ ಸುದ್ದಿ ಮಾಡಿದರು. ಹುಬ್ಬಳ್ಳಿಗೆ ಬಂದ ಮೋದಿ ನಾನು ಮಹಾದಾಯಿ ಯೋಜನೆ ಪೂರ್ಣ ಮಾಡುತ್ತೇನೆ ಎಂದು ಬಾಯಿ ಬಿಡಲಿಲ್ಲ. ಇದು ಬಿಜೆಪಿ ನಾಯಕರು.
ಅವರು ನಮ್ಮ ತ್ರಿವರ್ಣ ಧ್ವಜಕ್ಕೆ ಹೇಗೆ ಅಪಮಾನ ಮಾಡುತ್ತಾರೆ ಎಂದರೆ, ಅವರು ವಿವಾನಂದರ ಜನ್ಮದಿನದಂದು ಯುವಮಹೋತ್ಸವ ಕಾರ್ಯಕ್ರಮಕ್ಕೆ ಹುಬ್ಬಳ್ಳಿಗೆ ಬಂದಿದ್ದರು. ಅಂದು ಸರ್ಕಾರದ ಕಾರ್ಯಕ್ರಮ ಆಗುವಾಗ ತ್ರಿವರ್ಣ ಧ್ವಜ ಇರಬೇಕಾಗಿತ್ತು, ಆದರೆ ಕೇವಲ ಬಿಜೆಪಿ ಬಾವುಟ ಹಾರಿಸಿದ್ದಾರೆ. ಅಧಿಕಾರಕ್ಕೆ ಬರಲು ಈದ್ಗಾ ಮೈದಾನದಲ್ಲಿ ತ್ರಿವರ್ಣ ಧ್ವಜ ಇಟ್ಟುಕೊಂಡು ರಾಜಕಾರಣ ಮಾಡಿದರು. ಇಂದು ಅದೇ ತ್ರಿವರ್ಣ ಧ್ವಜ ಮರೆತಿದ್ದಾರೆ.
[19/01, 7:17 PM] Kpcc official: ದಾವಣಗೆರೆಯಲ್ಲಿ ಗುರುವಾರ ನಡೆದ ಪ್ರಜಾಧ್ವನಿ ಯಾತ್ರೆ ಸಮಾವೇಶದಲ್ಲಿ ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್, ವಿಧಾನಸಭೆ ವಿರೋಧ ಪಕ್ಷದ ನಾಯಕ ಸಿದ್ಧರಾಮಯ್ಯ, ಮಾಜಿ ಸಚಿವರಾದ ಶಾಮನೂರು ಶಿವಶಂಕರಪ್ಪ, ಎಚ್ ಎಂ ರೇವಣ್ಣ, ಎಸ್ ಎಸ್ ಮಲ್ಲಿಕಾರ್ಜುನ, ಎಚ್ ಕೆ ಪಾಟೀಲ್, ವಿಧಾನ ಪರಿಷತ್ ವಿರೋಧ ಪಕ್ಷದ ನಾಯಕ ಬಿ.ಕೆ. ಹರಿಪ್ರಸಾದ್, ಕಾರ್ಯಾಧ್ಯಕ್ಷ ಸಲೀಂ ಅಹಮದ್ ಮತ್ತಿತರರು ಭಾಗವಹಿಸಿದ್ದರು.
Post a Comment