ಉದಯನಿಧಿ ಸ್ಟಾಲಿನ್ ಹೇಳಿಕೆಯಿಂದ ಐಎನ್‍ಡಿಐಎ ಹಿಡನ್ ಅಜೆಂಡ ಅನಾವರಣ- ಆರ್.ಅಶೋಕ್। ಉದಯನಿಧಿ ಸ್ಟಾಲಿನ್ ಹೇಳಿಕೆ ಕುರಿತು ಕಾಂಗ್ರೆಸ್ ನಿಲುವೇನು?: ನಳಿನ್‍ಕುಮಾರ್ ಕಟೀಲ್ ಪ್ರಶ್ನೆ



ಉದಯನಿಧಿ ಸ್ಟಾಲಿನ್ ಹೇಳಿಕೆಯಿಂದ ಐಎನ್‍ಡಿಐಎ ಹಿಡನ್ ಅಜೆಂಡ ಅನಾವರಣ- ಆರ್.ಅಶೋಕ್
ಬೆಂಗಳೂರು: ತಮಿಳುನಾಡಿನ ಸಚಿವ ಉದಯನಿಧಿ ಸ್ಟಾಲಿನ್‍ರವರು ತಮ್ಮ ಹೇಳಿಕೆ ಮೂಲಕ ಐಎನ್‍ಡಿಐಎ ಹಿಡನ್ ಅಜೆಂಡವನ್ನು ಅನಾವರಣಗೊಳಿಸಿದ್ದಾರೆ ಎಂದು ರಾಜ್ಯದ ಮಾಜಿ ಸಚಿವ ಆರ್.ಅಶೋಕ್ ಅವರು ತಿಳಿಸಿದರು.
ಮಲ್ಲೇಶ್ವರದ ಬಿಜೆಪಿ ರಾಜ್ಯ ಕಾರ್ಯಾಲಯ “ಜಗನ್ನಾಥ ಭವನ”ದಲ್ಲಿ ಇಂದು ಮಾಧ್ಯಮ ಪ್ರತಿನಿಧಿಗಳ ಜೊತೆ ಮಾತನಾಡಿದ ಅವರು, ಹಿಂದೂಗಳನ್ನು ಅವಹೇಳನ ಮಾಡುವುದು ಮತ್ತು ಖಂಡಿಸುವುದೇ ಕಾಂಗ್ರೆಸ್ಸಿನ ಮತ್ತು ‘ಇಂಡಿಯ’ ಕೂಟದ ಗುಪ್ತ ಕಾರ್ಯಸೂಚಿ ಎಂದು ಟೀಕಿಸಿದರು.
ವಿಪಕ್ಷಗಳ ಅಜೆಂಡ ಇಂದು ದೇಶದ ಜನರ ಮುಂದೆ ವ್ಯಕ್ತವಾಗಿದೆ. ದೇವಸ್ಥಾನಗಳಿಗೆ ಹೋಗಿ ನಾಮ ಹಾಕಿಕೊಂಡು ಬರುವ ಸಿದ್ದರಾಮಯ್ಯ, ಡಿ.ಕೆ.ಶಿವಕುಮಾರ್‍ರವರು ಈ ಚಾಳಿಯನ್ನು ಮುಂದುವರೆಸಿದ್ದಾರೆ. ಚುನಾವಣೆ ಬಂದಾಗ ಯಾರು ಕೇಳದಿದ್ದರೂ ನಾನು ಹಿಂದೂ ಎನ್ನುವ ನಾಟಕ ಮಾಡುವುದು ಮತ್ತು ಚುನಾವಣೆ ನಂತರ ಹಿಂದೂಗಳನ್ನು ಬೈಯುವ ಪ್ರವೃತ್ತಿ ಸಿದ್ದರಾಮಯ್ಯರದು ಎಂದು ಆಕ್ಷೇಪಿಸಿದರು.
ಈ ಹೇಳಿಕೆ ಗಮನಿಸಿದ ಜನತೆ ಮುಂದಿನ ಚುನಾವಣೆಗಳಲ್ಲಿ ಇವರಿಗೆ ಬುದ್ಧಿ ಕಲಿಸುತ್ತಾರೆ ಎಂದು ವಿಶ್ವಾಸ ವ್ಯಕ್ತಪಡಿಸಿದರು. ಈ ವ್ಯಕ್ತಿಯೂ ಹುಚ್ಚನ ರೀತಿ ಮಾತನಾಡುತ್ತಾರೆ. ಹಿಂದೂಗಳ ಬಗ್ಗೆ ಮಾತನಾಡುವ ನೈತಿಕ ಅಧಿಕಾರವನ್ನು ಇವರಿಗೆ ಯಾರು ಕೊಟ್ಟಿದ್ದಾರೆ ಎಂದು ಪ್ರಶ್ನಿಸಿದರು.
‘ಇವನು ಹಿಂದೂ ಹೌದೇ ಅಲ್ಲವೇ ಎಂದು ಮೊದಲು ಹೇಳಲಿ. ಆಮೇಲೆ ಮಾತನಾಡಲಿ’ ಎಂದು ಸವಾಲೆಸೆದರು. ‘ಹಿಂದೂಗಳ ಅವಹೇಳನ, ಬೇರೆಯವರ ಓಲೈಕೆ ಮಾಡುವುದು; ಏನು ಭಾರತವನ್ನು ಪಾಕಿಸ್ತಾನ ಮಾಡಲು ಹೊರಟಿದ್ದಾರಾ ಇವರು’ ಎಂದು ಕೇಳಿದರು.
ನರೇಂದ್ರ ಮೋದಿಯವರು ಜಮ್ಮು ಕಾಶ್ಮೀರವನ್ನು ನಮ್ಮ ದೇಶದೊಳಗೆ ತಂದಿದ್ದಾರೆ. ನಮ್ಮ ಪ್ರಧಾನಿ, ಸೈನಿಕರು ಪಾಕಿಸ್ತಾನ, ಚೀನಾದ ವಿರುದ್ಧ ತೊಡೆತಟ್ಟಿ ನಿಂತಿದ್ದಾರೆ. ಅಂಥ ಸಂದರ್ಭದಲ್ಲಿ ಇವರು ಹಿಂದೂಗಳ ಭಾವನೆಗೆ ಕೊಡಲಿ ಪೆಟ್ಟು ಹೊಡೆಯುತ್ತಿದ್ದು, ದೇಶದ ಜನತೆ ಇವರನ್ನು ಕ್ಷಮಿಸುವುದಿಲ್ಲ ಎಂದು ನುಡಿದರು.
ಕಾವೇರಿ ನೀರನ್ನು ಮರುಮಾತಿಲ್ಲದೆ ಬಿಟ್ಟ ಸಿದ್ದರಾಮಯ್ಯ, ಡಿ.ಕೆ.ಶಿವಕುಮಾರ್‍ರವರು ಇದರ ಕುರಿತು ತಮ್ಮ ಅಭಿಪ್ರಾಯ ಹೇಳಬೇಕು. ಧರ್ಮದ ಕುರಿತು ಅವರ ಮಾತನ್ನು ಬೆಂಬಲಿಸಿದರೆ ಮುಂದಿನ ದಿನಗಳಲ್ಲಿ ಕಾಂಗ್ರೆಸ್ಸಿನ ಸ್ಥಿತಿ ಏನಾಗಲಿದೆ ಎಂದು ಊಹಿಸಿಕೊಳ್ಳಿ ಎಂದು ತಿಳಿಸಿದರು.
ಹಿಂದೂ ಧರ್ಮದ ಕುರಿತು, ಸನಾತನ ಧರ್ಮದ ವಿಚಾರದಲ್ಲಿ ತಮಿಳುನಾಡಿನ ಸಚಿವ ಉದಯನಿಧಿ ಸ್ಟಾಲಿನ್ ಅವಹೇಳನಕಾರಿ ಮಾತನ್ನಾಡಿದ್ದು ಅದನ್ನು ಖಂಡಿಸುವುದಾಗಿ ತಿಳಿಸಿದರು. ದೇಶದ ಬೆಳವಣಿಗೆಗೆ ಅನನ್ಯ ಕೊಡುಗೆಯನ್ನು ಸನಾತನ ಹಿಂದೂ ಧರ್ಮ ನೀಡಿದೆ. ಭಾರತ ಎಂದರೆ ಹಿಂದೂಗಳ ಭೂಮಿ. ಹಿಂದೂಗಳಿಗೆ ಇರುವ ದೇಶ ಇದೊಂದೇ ಎಂದು ಪ್ರತಿಪಾದಿಸಿದರು. ಹಿಂದೂ ಎಂಬುದು ಒಂದು ಪರಂಪರೆ. ಸನಾತನ ಎಂಬುದು ನಮ್ಮ ರಕ್ತದ ಕಣಕಣದಲ್ಲೂ ಬಂದಿದೆ ಎಂದರು.

ಉದಯನಿಧಿ ಸ್ಟಾಲಿನ್ ಹೇಳಿಕೆ ಕುರಿತು ಕಾಂಗ್ರೆಸ್ ನಿಲುವೇನು?: ನಳಿನ್‍ಕುಮಾರ್ ಕಟೀಲ್ ಪ್ರಶ್ನೆ
ಬೆಂಗಳೂರು: ನಿನ್ನೆ ಉದಯನಿಧಿ ಸ್ಟಾಲಿನ್ ಅವರು ಸನಾತನ ಹಿಂದೂ ಧರ್ಮದ ವಿರುದ್ಧ ನೀಡಿದ ಹೇಳಿಕೆಯನ್ನು ಖಂಡಿಸುವುದಾಗಿ ಬಿಜೆಪಿ ರಾಜ್ಯಾಧ್ಯಕ್ಷ ಮತ್ತು ಸಂಸದ ನಳಿನ್‍ಕುಮಾರ್ ಕಟೀಲ್ ಅವರು ತಿಳಿಸಿದರು.
ಮಲ್ಲೇಶ್ವರದ ಬಿಜೆಪಿ ರಾಜ್ಯ ಕಾರ್ಯಾಲಯ “ಜಗನ್ನಾಥ ಭವನ”ದಲ್ಲಿ ಇಂದು ಮಾಧ್ಯಮ ಪ್ರತಿನಿಧಿಗಳ ಜೊತೆ ಮಾತನಾಡಿದ ಅವರು, ಸನಾತನ, ಹಿಂದೂ ಧರ್ಮದ ವಿರುದ್ಧ ಅವಹೇಳನ ಮಾಡಿದ್ದಾರೆ. ತಮಿಳುನಾಡಿನ ರಾಜಕಾರಣದಲ್ಲಿ ನಿರಂತರವಾಗಿ ಆರ್ಯ- ದ್ರಾವಿಡ ಎಂಬ ಸಮಸ್ಯೆಯನ್ನು ಹುಟ್ಟು ಹಾಕಿ ಅದರ ಮೂಲಕ ರಾಜಕಾರಣ ಮಾಡುವುದನ್ನು ಕಂಡಿದ್ದೇವೆ ಎಂದರು.
ಆ ರಾಜಕಾರಣದ ಮುಂದುವರೆದ ಭಾಗವಾಗಿ ಸನಾತನ ಹಿಂದೂ ಧರ್ಮಕ್ಕೆ ಅವಹೇಳನ ಮಾಡಿದ್ದಾರೆ ಎಂದ ಅವರು, ಡಿಎಂಕೆ ಪಕ್ಷವು ಐಎನ್‍ಡಿಐಎ ಜೊತೆ ಸೇರಿದೆ. ಐಎನ್‍ಡಿಐಎ ಅಂಗ ಪಕ್ಷಗಳು ಇದರ ಕುರಿತು ಏನು ಹೇಳುತ್ತಾರೆಂದು ಸ್ಪಷ್ಟಪಡಿಸಲು ಅವರು ಒತ್ತಾಯಿಸಿದರು.
ಈ ರಾಜ್ಯದಲ್ಲಿ ಐಎನ್‍ಡಿಐಎ ಪಾಲುದಾರಿಕೆ ಹೊಂದಿದ ಕಾಂಗ್ರೆಸ್ ನಿಲುವೇನು? ಇದನ್ನು ಸಮರ್ಥಿಸುತ್ತಾರಾ? ಸಿದ್ದರಾಮಯ್ಯ, ಡಿ.ಕೆ.ಶಿವಕುಮಾರ್ ಏನು ಹೇಳುತ್ತಾರೆ? ಎಂದು ಕೇಳಿದರು. ಭಾರತದ ಆತ್ಮ ಹಿಂದುತ್ವ. ಈ ದೇಶದ ಬಹುಸಂಖ್ಯಾತ ಜನರು ಹಿಂದೂಗಳು. ಭಾರತವನ್ನೇ ಹಿಂದೂ ರಾಷ್ಟ್ರ ಎಂದು ಕರೆಯಲಾಗುತ್ತಿದೆ. ಇಲ್ಲಿ ಇರುವ ಧರ್ಮ ಒಂದೇ; ಅದು ಹಿಂದೂ ಧರ್ಮ. ಬಾಕಿ ಉಳಿದುದೆಲ್ಲ ಮತಗಳು ಎಂದು ವಿಶ್ಲೇಷಿಸಿದರು.
ಇಲ್ಲಿನ ಆತ್ಮ ಹಿಂದುತ್ವ. ಇಲ್ಲಿನ ಸಂಸ್ಕøತಿ ಶ್ರೇಷ್ಠವಾದುದು. ಭಾರತದ ಸನಾತನ ಸಂಸ್ಕøತಿಯನ್ನು ಜಗತ್ತು ಒಪ್ಪಿಕೊಳ್ಳುತ್ತಿದೆ. ರಾಜಕಾರಣಕ್ಕಾಗಿ ಇಂಥ ಹೇಳಿಕೆ ಸರಿಯಲ್ಲ. ಇದನ್ನು ಖಂಡಿಸುವುದಾಗಿ ತಿಳಿಸಿದರು. ರಾಜ್ಯ ಪ್ರಧಾನ ಕಾರ್ಯದರ್ಶಿ ಅಶ್ವತ್ಥನಾರಾಯಣ್ ಅವರು ಈ ಸಂದರ್ಭದಲ್ಲಿ ಹಾಜರಿದ್ದರು.


           
ಕು.ಸೌಜನ್ಯ ಹತ್ಯೆ ಮರುತನಿಖೆಗೆ ರಾಜ್ಯಪಾಲರಿಗೆ ಮನವಿ
ಬೆಂಗಳೂರು: ಬೆಳ್ತಂಗಡಿ ತಾಲ್ಲೂಕಿನ ಕು.ಸೌಜನ್ಯ ಹತ್ಯೆ ಪ್ರಕರಣದ ಮರುತನಿಖೆ ಮಾಡುವಂತೆ ಆದೇಶ ನೀಡಲು ರಾಜ್ಯಪಾಲರನ್ನು ಬಿಜೆಪಿ ನಿಯೋಗ ಮನವಿ ಮಾಡಿದೆ.
ಬಿಜೆಪಿ ರಾಜ್ಯಾಧ್ಯಕ್ಷ ಮತ್ತು ಸಂಸದ ನಳಿನ್‍ಕುಮಾರ್ ಕಟೀಲ್ ಅವರ ನೇತೃತ್ವದ ನಿಯೋಗ ಇಂದು ಈ ಕುರಿತು ಮನವಿ ಸಲ್ಲಿಸಿತು. ದಕ್ಷಿಣ ಕನ್ನಡ, ಉಡುಪಿ ಜಿಲ್ಲೆಗಳ ಬಿಜೆಪಿ ಶಾಸಕರು ಈ ನಿಯೋಗದಲ್ಲಿ ಇದ್ದರು.
ಬಿಜೆಪಿ ರಾಜ್ಯ ಪ್ರಧಾನ ಕಾರ್ಯದರ್ಶಿ ಅಶ್ವತ್ಥನಾರಾಯಣ್, ರಾಜ್ಯದ ಮಾಜಿ ಸಚಿವ ವಿ. ಸುನೀಲ್ ಕುಮಾರ್, ಶಾಸಕರಾದ ಕು. ಭಾಗೀರಥಿ ಮುರಳ್ಯ, ವೇದವ್ಯಾಸ್ ಕಾಮತ್, ಡಾ|| ವೈ. ಭರತ್ ಶೆಟ್ಟಿ, ಹರೀಶ್ ಪೂಂಜಾ, ಗುರ್ಮೆ ಸುರೇಶ್ ಶೆಟ್ಟಿ ಮತ್ತಿತರರು ನಿಯೋಗದಲ್ಲಿ ಇದ್ದರು.


       
  (ಕರುಣಾಕರ ಖಾಸಲೆ)
ಮಾಧ್ಯಮ ಸಂಚಾಲಕರು
  ಬಿಜೆಪಿ ಕರ್ನಾಟಕ

Post a Comment

Previous Post Next Post